ಈ ಹೊತ್ತಿನ ಚಿತ್ತಾರ

ಈ ಹೊತ್ತು, ಈ ಕ್ಷಣ
ಮಾತ್ರ ನಮ್ಮದು
ನಿನ್ನೆ ಮೊನ್ನೆಯ ಇತಿಹಾಸ,
ಕಾಣದ ನಾಳೆಯ ವರ್ತಮಾನದ
ಇಣುಕು... ಎರಡೂ ಕೈಯ್ಯೊಳಗಿಲ್ಲ!
ಈಗ ಕಾಣುವುದು
ಬೊಗಸೆಗೆ ಸಿಕ್ಕಿದ್ದು
ಕಣ್ಣ ಪರಿಧಿಗೆ ಕಂಡದ್ದು
ಮಾತ್ರ ತಕ್ಷಣದ ಸತ್ಯ

....

ದಿಢೀರ್ ಸುರಿದ ಮಳೆ
ಥಟ್ಟನೆ ಆವರಿಸಿದ ಬಿಸಿಲು
ಕಾಡಿದ ಅಪಮಾನ
ಗೆಲವಿನ ಅಹಂಕಾರ,
ಅಧಿಕಾರದ ಮದ,
ಅಪಾರ್ಥಗಳ ಶಂಕೆ
ಬಾನಂಗಳದ ಚಿತ್ತಾರ
ಕೂಡಿಟ್ಟ ದುಡ್ಡು
ಕೊನೆಗೆ ದೇಹವೂ ಶಾಶ್ವತವಲ್ಲ!

.......


ಹಿಂದೆಲ್ಲೋ ಸಾಧಿಸಿದ್ದರ ಬಗ್ಗೆ
ವಿಪರೀತ ಪ್ರತಾಪ ಪ್ರದರ್ಶನ,
ನಾಳೆ ಮಾಡುವುದರ ಕುರಿತು
ಅತಿರೇಕದ ಭಾಷಣ
ಎರಡಕ್ಕೂ ಆಯುಷ್ಯ ಕಡಿಮೆ
ತಾರೀಕು ದಾಟಿದ್ದಕ್ಕೂ
ವ್ಯವಹಾರ ನಡೆಯದ್ದಕ್ಕೂ
ಪುರಾವೆ ಸಿಕ್ಕುವುದಿಲ್ಲ
ಈಗ, ಇವತ್ತಿನದ್ದಕ್ಕೆ ಮಾತ್ರ ರಶೀದಿ!

......

ಮೋಡಗಳ ಜೋಡಣೆಯೂ
ಚಂಚಲ, ಬದುಕಿನ ಆಯ್ಕೆಗಳ ಹಾಗೆ
ಹಣೆಬರಹ, ಅದೃಷ್ಟ, ಅವಕಾಶಗಳ
ಲಭ್ಯತೆಯ ಹಾಗೆ
ಸ್ಕೇಲು, ಪೆನ್ಸಿಲು ಹಿಡಿದು
ಚಿತ್ರ ಮಾಡಿಡಲು ಬರುವುದಿಲ್ಲ
ಪ್ರಕೃತಿ ಈ ಹೊತ್ತು
ಕೊಟ್ಟದ್ದಕ್ಕೆ ಪ್ರೇಕ್ಷಕರಾಗುವುದೇ ಆಯ್ಕೆ
ಕಣ್ಣೇ ಕ್ಯಾಮೆರಾ, ಮನಸ್ಸೇ ಮೆಮೊರಿ ಕಾರ್ಡು!
-KM

 

No comments:

Popular Posts