ಲೈಕು ಮಾಡು ಮನುಸಾ...

ಇದು ನನ್ನ ಬದುಕಿನ ಕೊನೆಯ ಪೋಸ್ಟು...
ಇಷ್ಟಪಟ್ಟು...
ಕಷ್ಟಪಟ್ಟು...
ಹಾಕಿದ ಕವನ, ದೇಶಭಕ್ತಿಯ ಲೇಖನ,
ನಾನೇ ಬರೆದ ಕಥೆಗಳಿಗೆ
ದಾಕ್ಷಿಣ್ಯಕ್ಕೂ ನಾಲ್ಕು ಕಮೆಂಟು ಬರುವುದಿಲ್ಲ...!
ಒಂದೋ, ಎರಡೋ ಲೈಕುಗಳು...
ಇದಾ ನೀವು ನಿಮ್ಮ ಫೇಸ್ಬುಕ್ ಫ್ರೆಂಡಿಗೆ ತೋರಿಸುವ ಗೌರವ?
ನಾನು ನಿಮ್ಮ ಕವನಗಳನ್ನು ಎಷ್ಟು ಹೊಗಳಿ ಕಮೆಂಟು ಮಾಡುತ್ತೇನೆ....
ಅದರ ಉಪಕಾರಕ್ಕೂ ನನ್ನ ಕವನಕ್ಕೆ ಕಮೆಂಟು ಮಾಡವುದಿಲ್ಲವಲ್ಲ ಪಾಪಿಗಳೇ..!!
ಅದೇ, ಪಕ್ಕದ ಮನೆಯ ಹುಡುಗಿ ಹಾಕುವ ಪ್ರೊಫೈಲ್ ಫೋಟೋ,
ಎಲ್ಲಿಂದಲೋ ಎಗರಿಸಿದ ನುಡಿಮುತ್ತಿಗೆ ನೂರಾರು ಕಮೆಂಟು, 

ಸಾವಿರಾರು ಲೈಕುಗಳು
ಅಸಂಖ್ಯಾತ ಶೇರುಗಳು...!!
ನನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ,
ನಿಮಗೆಲ್ಲ ನಮಸ್ಕಾರ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ...


.....

ಸ್ವಘೋಷಿತ ಕವಿ ತಿಮ್ಮ ಹೀಗೊಂದು ಪೋಸ್ಟು ಹಾಕಿದ್ದೇ ತಡ. ಆತನ ಅನಿವಾರ್ಯ ಮಿತ್ರನೊಬ್ಬನಿಗೆ ಶಾಕ್ ಆಯಿತು. ಸದಾ ಅನ್ಯಮನಸ್ಕನಾಗಿರುವ ತಿಮ್ಮ ಆತ್ಮಹತ್ಯೆ ಮಾಡಿದರೂ ಮಾಡಿಯಾನು ಅಂತ ಭಯ ಆಯ್ತು. ತಕ್ಷಣ ಈ ಪೋಸ್ಟು ಶೇರ್ ಮಾಡಿ ಶರಾ ಬರೆದ... 


"ಕಮೆಂಟುಗಳ ಕೊರತೆಯಿಂದ ಬದುಕಿಗೇ ಇತಿಶ್ರೀ ಹಾಡಿದ ನೊಂದ ಕವಿ ಪುಂಗವ..."

ತಕೊಳ್ಳಿ... 

ಕುತೂಹಲಕ್ಕೆ ತಿಮ್ಮನ ವಾಲ್ ಗೆ ಇಣುಕಿದ ಮಂದಿ ಸಾಂತ್ವನ ಹಾಕಲು ತೊಡಗಿದರು... 
"ಬ್ರೋ ಯಾಕಿಷ್ಟು ನಿರಾಶಾವಾದ? ಬದುಕಿನಲ್ಲಿ ಲೈಕು, ಕಮೆಂಟುಗಳೇ ಅಂತಿಮವಲ್ಲ, ಬದುಕಿನ ಯುದ್ಧದಲ್ಲಿ ಜಯಿಸಬೇಕು.... ನಿಮ್ಮ ನೋವು ನಮಗೆ ಅರ್ಥವಾಗಿದೆ, ಆದರೆ ಜಾಲತಾಣಕ್ಕೋಸ್ಕರ ಬದುಕನ್ನೇ ಕೊನೆಗೊಳಿಸುವುದು ತಪ್ಪಲ್ಲವೇ...?"

ಇನ್ನೊಬ್ಬ ಸೃಜನಶೀಲ ಬರಹಗಾರ ಬರೆದು ಹಾಕಿದ... 

"ಇದು ಲಾಕ್ ಡೌನ್ ಮನಸ್ಥಿತಿಗೆ ಸಂಕೇತ, ಮನಸ್ಸು ಖಿನ್ನತೆಗೊಳಗಾಗಿರುವುದರ ಸೂಚನೆ. ಕವಿ ತಿಮ್ಮನ ಸೂಕ್ಷ್ಮ ಮನಸ್ಸನ್ನು ನಾಗರಿಕ ಸಮಾಜ ಕಡೆಗಣಿಸಿದ್ದರ ಪ್ರತೀಕ... ಈ ಸಾವು ಅಕ್ಷಮ್ಯ.... ಇತಿಹಾಸ ಈ ಸಾವನ್ನು ಕ್ಷಮಿಸುವುದಿಲ್ಲ..."

ನಂತರ ಸಾಲು ಸಾಲು ಕಮೆಂಟುಗಳು ಬರತೊಡಗಿದವು. ಪ್ರತಿದಿನ ತಿಮ್ಮನ ಅರ್ಥವಾಗದ ಕವನಗಳನ್ನು ನೋಡಿಯೂ ನೋಡದವರಂತೆ ಮೌನವಾಗಿರುತ್ತಿದ್ದವರೆಲ್ಲ ಕಮೆಂಟು ಟೈಪಿಸತೊಡಗಿದರು. ಏಕಾಂಗಿತನ ಪರಿಣಾಮವೇ? ಕೊರೋನಾದ ಆತಂಕವೇ...? ಸೃಜನಶೀಲ ಮನಸ್ಸಿನ ತಿರಸ್ಕಾರದ ಪ್ರತೀಕವೇ...? ಸಾಂತ್ವನದ ಕೊರತೆಯೇ...? ಇತ್ಯಾದಿ ಇತ್ಯಾದಿ...

........

ಯಾರೋ ಒಬ್ಬ ತಿಮ್ಮನ ಪೋಸ್ಟನ್ನು ಸ್ಕ್ರೀನ್ ಶಾಟ್ ತೆಗೆದು ತನ್ನ ವಾಟ್ಸಪ್ ಸ್ಟೇಟಸ್ಸಿನಲ್ಲಿ ಹಾಕಿ RIP ಅಂತ ಕ್ಯಾಪ್ಶನ್ ಕೊಟ್ಟು ಹಾಕಿದ... 


"ಸೆಂಡ್ ಮಿ ಪ್ಲೀಸ್. ಸೆಂಡ್ ಮಿ ಪ್ಲೀಸ್..." ಅಂತ ಹಲವರು ಆ ಸ್ಕ್ರೀನ್ ಶಾಟನ್ನು ತಾವೂ ತರಿಸಿಕೊಂಡು ಸ್ಟೇಟಸ್ಸುಗಳಲ್ಲಿ ಹಾಕಿ, ಗ್ರೂಪುಗಳಿಗೆ ಫಾರ್ವರ್ಡ್ ಮಾಡಿ ತಿಮ್ಮನ ಆತ್ಮಕ್ಕೆ ಶಾಂತಿ ಕೋರಿದರು. ಆತನಿಗೊಂದು ಕರೆ ಮಾಡಿ ಆತನ ಮನೆಯವರಿಗೆ ಸಾಂತ್ವನ ಹೇಳಬೇಕೆಂದು ಯಾರಿಗೂ ಹೊಳೆಯಲೇ ಇಲ್ಲ...!!

....

ತಿಮ್ಮ ಪೋಸ್ಟು ಹಾಕಿದ ಗಂಟೆಯೊಳಗೆ 1050 ಕಮೆಂಟುಗಳು, 500 LIKEಗಳು (ಅದು ತಿಮ್ಮನ ಬರಹಕ್ಕೋ, LIKE ಆತ ಸತ್ತದ್ದಕ್ಕೋ, ಅಥವಾ ಸತ್ಯವನ್ನೇ ಹೇಳಿ ಆತ್ಮಹತ್ಯೆ ಮಾಡಿದ್ದಕ್ಕೋ ಅಂತ ಹೇಳಲು ಲೈಕುಗಳಿಗೆ ಬಾಯಿ ಬರುವುದಿಲ್ಲವಲ್ಲ!)... ಹಾಗೂ ಸುಮಾರು 720 shareಗಳು ಆದವು... ಸಿಕ್ಕಾಪಟ್ಟೆ ವೈರಲ್ ಆಯ್ತು ತಿಮ್ಮನ ಮರಣಶಾಸನದಂತಹ ಬರಹ...!

.....

ಇದೆಲ್ಲ ನಡೆದು ಎರಡು ಗಂಟೆಯ ಬಳಿಕ ತಿಮ್ಮನ ಫೇಸುಬುಕ್ ಗೋಡೆಯಲ್ಲಿ 1051ನೇ ಕಮೆಂಟು ಬಂತು. ಮತ್ಯಾರದ್ದೂ ಅಲ್ಲ ತಿಮ್ಮನದ್ದೇ...!!!


"ಸಾರಿ ಗೈಸ್... ನನ್ನ ಬರಹಕ್ಕೂ ಇಷ್ಟೆಲ್ಲ ಕಮೆಂಟು, ಲೈಕು ಬರುತ್ತದೆ ಅಂತ ಇವತ್ತೇ ಗೊತ್ತಾಗಿದ್ದು. ನನ್ನ ಜನ್ಮ ಸಾರ್ಥಕವಾಯ್ತು... ಇಷ್ಟು ಕಮೆಂಟುಗಳನ್ನು ಹಿಡ್ಕೊಂಡು ನಾನಿನ್ನು ಸತ್ತರೂ ಪರವಾಗಿಲ್ಲ. ನೇರ ನಾನು ಸ್ವರ್ಗಕ್ಕೇ ಹೋಗಬಲ್ಲೆ ಅನ್ನುವಷ್ಟು ಹಗುರವಾಗಿದ್ದೇನೆ ನಾನು ಇಂದು..."

"ಅದು ನೀವೆಂದುಕೊಂಡ ಹಾಗೆ ನನ್ನ ಮರಣಪತ್ರವಲ್ಲ. ನಿನ್ನೆಯಷ್ಟೇ ನಾನು ಬರೆದ ಸೃಜನಶೀಲ ಕವನ. ಶೀರ್ಷಿಕೆ ಕೊಡಲು ಬಾಕಿ ಆಯ್ತು. ಸಾರಿ ಗೈಸ್... ಥ್ಯಾಂಕ್ಯು ಅಗೈನ್... ಇಷ್ಟೊಂದು ಮಂದಿ ಸ್ಪಂದಿಸಿದ್ದಕ್ಕೆ....!"

.....

ಹೀಗೊಂದು ಕಮೆಂಟು ಬಂದದ್ದೇ ತಡ... ಆತನ ಫ್ರೆಂಡ್ ಲಿಸ್ಟಿನಲ್ಲಿದ್ದ 2054 ಮಂದಿಯಲ್ಲಿ 1025 ಮಂದಿ ಆತನನ್ನು unfriend ಮಾಡಿಬಿಟ್ಟರು...! ಮೂವರಿಗೆ ಫೇಸ್ ಬುಕ್ಕಿನ ಮೇಲೆ ಜಿಗುಪ್ಸೆ ಬಂದು ಅನ್ ಇನ್ ಸ್ಟಾಲ್ ಮಾಡಿದ್ರು...
ಇದ್ಯಾವುದೂ ಗೊತ್ತಿಲ್ಲದೆ ಫೇಸು ಬುಕ್ಕಿನಲ್ಲಿ ಇಲ್ಲದೆ ಕೇವಲ ವಾಟ್ಸಪ್ ಮಾತ್ರ ಬಳಸುವವರು. ಆ ಸ್ಕ್ರೀನ್ ಶಾಟ್ ನ್ನು ಯಥಾಶಕ್ತಿ ಫಾರ್ವರ್ಡ್ ಮಾಡುತ್ತಲೇ ಇದ್ದರು... ಎಂಬಲ್ಲಿಗೆ ಕಥೆ ಮುಕ್ತಾವಾಯಿತು.

-ಕೃಷ್ಣಮೋಹನ ತಲೆಂಗಳ.


No comments: