ಪದಗಳು ತುಂಬಿದ ಕವನವಿದಲ್ಲ....

ಕಂಡದ್ದು, ಕಾಣಿಸಿಕೊಂಡದ್ದು, ನೋಡಿದ್ದು, ತಿಳಿದದ್ದು, ತಿಳಿದುಕೊಂಡದ್ದು, ತೋರಿಸಿಕೊಂಡದ್ದು, ಬಚ್ಚಿಟ್ಟದ್ದು... ಸಣ್ಣ ಪುಟ್ಟ ವ್ಯತ್ಯಾಸಗಳ ಹಾಗೆ.
ಆದರೆ ಅರ್ಥಕ್ಕೂ ಭಾವಕ್ಕೂ ಅಂತರವಿದೆಯಲ್ವೇ... ಕಂಡಬರುವುದದಕ್ಕೂ, ತಿಳಿದುಕೊಳ್ಳುವುದಕ್ಕೂ... ಗ್ರಹಿಕೆ ಮತ್ತು ವಿಶ್ಲೇಷಣೆಯ ಸಾಮರ್ಥ್ಯಕ್ಕೆ ಬಿಟ್ಟದ್ದು.


ಕೆಲವೊಂದು ತಡವಾಗಿ ಅರ್ಥವಾಗುವುದು. ಕೆಲವು ಸುಲಭವಾಗಿ ಕಾಣಿಸಿಕೊಂಡು, ಬಳಿಕ ಜಟಿಲವಾಗಿ ಮತ್ತೊಮ್ಮೆ ಒಗಟಾಗಿ ಮತ್ತೊಮ್ಮೆ ಕಠಿಣವಾಗಿ ಅರ್ಥಕ್ಕೆ ಸಿಲುಕದ್ದೆಂಬ ಭಾವ ಕಾಠಿಣ್ಯವನ್ನು ಮೂಡಿಸುವುದು. ಸಂದರ್ಭಗಳು ಹಾಗೂ ಪರಿಸ್ಥಿತಿಗಳಿಗೆ ಪೂರಕವಾಗಿ ಅರಿತುಕೊಳ್ಳುವುದು ಅಥವಾ ಕಂಡುಕೊಳ್ಳುವುದು ಕೆಲವೊಮ್ಮೆ ಸಿಕ್ಕು ಹಾಕಿಕೊಂಡ ನೂಲಿನ ಉಂಡೆಯ ಹಾಗೆ. ಬಿಡಿಸಲು ಬರುವುದಿಲ್ಲ. ಅಸಲಿಗೆ ಸಿಕ್ಕಿ ಹಾಕಿಕೊಂಡ ನೂಲಿನ ಒಂದು ತುದಿಯೂ ಕೈಗೆ ಸಿಕ್ಕುವುದಿಲ್ಲ. ತುದಿ ಸಿಕ್ಕದೆ, ಗಂಟನ್ನು ಬಿಚ್ಚಲೂ ಆಗುವುದಿಲ್ಲ. ಅಸಹನೆ ಜಾಸ್ತಿಯಾದರೆ ನೂಲಿನ ಉಂಡೆಯೇ ತುಂಡು ತುಂಡಾದೀತು.


ನಂಬಿಕೆ, ನಿರೀಕ್ಷೆ, ಕಲ್ಪನೆ, ಹೋಲಿಕೆ ಕೊನೆಗೆ ಗ್ರಹಿಕೆ ಇಷ್ಟರ ನಡುವೆಯೂ ಅರ್ಥ ಅಪಾರ್ಥಗಳು ಘಟಿಸಬಹುದು. ಕಾಣದ್ದನ್ನು ನಂಬುವುದು, ನಿಖರವಲ್ಲದನ್ನು ನಿರೀಕ್ಷಿಸುವುದು, ಅಸಂಬದ್ಧವಾದುದರೊಡನೆ ಹೋಲಿಸುವುದು ಕೊನೆಗೆ ಏನು ಗ್ರಹಿಕೆಗೆ ಸಿಗುತ್ತದೋ ಅದು ವೇದ್ಯವಾಗುವುದು... ಇದು ಬದುಕು.
ವಾಸ್ತವ ಎನ್ನುವುದು ಸತ್ಯದ ಪ್ರತೀಕ ತಾನೆ. ಹಾಗಿರುವಾಗ ಸತ್ಯವೆಂಬುದು ಅಸ್ತಿತ್ವದಲ್ಲಿರುತ್ತದೆ. ಆದರೆ ಅದನ್ನು ಕಂಡುಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಸಂದರ್ಭ, ಪರಿಸ್ಥಿತಿ, ಮನಸ್ಥಿತಿ, ಸಮಯಾವಕಾಶ, ತಾಳ್ಮೆಗಳೆಲ್ಲವೂ ಇವುಗಳ ಮೇಲೆ ಪರಿಣಾಮ ಬೀರುತ್ತದೆ. ವಿಶ್ಲೇಷಿಸುವ ತಾಳ್ಮೆ ಇದ್ದಾಗ ಒಂದೊಂದನ್ನು ಬೇರೆ ಬೇರೆಯಾಗಿ ಇರಿಸಿ ಸೂಕ್ಷ್ಮವಾಗಿ ಪರಿಶೀಲಿಸಲೂ ಸಾಧ್ಯವಾಗುತ್ತದೆ.


ಪಡೆಯುವುದು, ಪಡೆದುಕೊಂಡೆ ಅಂದುಕೊಳ್ಳುವುದು, ಬಿಡಲಾಗದು ಎಂದುಕೊಳ್ಳುವುದು, ಕಳೆದುಕೊಂಡೆ ಎಂದು ಕಂಡುಕೊಳ್ಳುವುದು. ಹೊಂದಿದ್ದೆ ಎಂದು ಭಾವಿಸುರುವುದು ಕೂಡಾ ಇಂತಹದ್ದೇ ಸಾಲಿಗೆ ಬರುವಂಥಹವು ಅಲ್ಲವೇ. ಭಾವದಲ್ಲಿ ಪಡೆದು, ಭಾವದಲ್ಲೇ ಕಳೆದು, ಭಾವದಲ್ಲೇ ಹೊಂದಿ, ಭಾವದಲ್ಲೇ ತಳಮಳಿಸಿದ ಹಾಗೆ. ಸಾಮರ್ಥ್ಯ, ಅದೃಷ್ಟ, ಪ್ರತಿಕೂಲ ಪರಿಸ್ಥಿತಿ, ಯೋಗ್ಯತೆ ಮತ್ತು ಸಂದರ್ಭಗಳೇ ಬಹುಷಹ ಇವನ್ನೆಲ್ಲ ನಿರ್ಧರಿಸುತ್ತವೆಯೇನೋ. ಕೆಸುವಿನೆಲೆಯ ಮೇಲಿನ ನೀರ ಬಿಂದುವಿನ ಹಾಗೆ ಬದುಕು ಎಂದು ಕಂಡುಕೊಂಡರೆ ಇವಿಷ್ಟೂ ನಿರ್ಲಿಪ್ತದಾಚೆಗೆ ಸರಿದುಹೋಗಬಹುದೇನೋ. ಅದರಿಂದಾಚೆ ಹಚ್ಚಿಕೊಂಡಾಗಲೇ ಕಳೆದುಕೊಳ್ಳುವ ಭೀತಿ ಕಾಡುವುದು....

ಕಡಲಿಗೂ ಮಿತಿಯಿದೆ. ಬದುಕಿಗೂ ಪರಿಧಿಯಿದೆ. ಗೆಲವು, ಅಧಿಕಾರ, ಐಶ್ವರ್ಯ ಎಲ್ಲದಕ್ಕೂ ಇದೆ... ಹಾಗಾಗಿ ಅದನ್ನು ದಾಟಲು ಹೊರಡುವ ಮುನ್ನ ಚಿಂತಿಸಿದರೆ ಒಳಿತು... ಕಾಲೆಷ್ಟು ಚಾಚಬಲ್ಲೆ.. ಎಟುಕೀತಾ ಆಚೆಯ ದಡ ಅಂತ!

-KM

No comments: