ಹೊತ್ತು ಗೊತ್ತಿರಬೇಕು!

ಹೊತ್ತು ಗೊತ್ತಿರಬೇಕು!

.....

ಇಷ್ಟಪಡುವ ಕಡಲ ತಡಿಯಲ್ಲೂ
ಯಾರೂ ದಿನವಿಡೀ ಕೂರುವುದಿಲ್ಲ...
ಮರಳಲ್ಲಿ ಬರೆದ ಅಕ್ಷರಗಳಿಗೆ ಹೆಚ್ಚು ಆಯುಸ್ಸಿಲ್ಲ...
ಸಂಜೆ ಕೆಂಪಗೆ ಮುಳುಗುವ ಸೂರ್ಯನೂ ಜಾಸ್ತಿ ಕಾಯಿಸುವುದಿಲ್ಲ....

ಅಲೆ ಬಂದರೂ
ಬಳಿಗೆ ಐತಂದರೂ ಗೂಟ ಹಾಕಿ ಕೂರುವುದಿಲ್ಲ....
ಮರಳ ಬಾಚಿ ಮರಳಿ
ಗಡಿ ಆಚೆ ಭೋರ್ಗರೆದು
ಸೀಮೆ ಕಳೆಯದೆ
ನೊರೆದೋರಿ ಕರಗುವುದಲ್ಲ...

ತಂಪುಗಾಳಿ
ಕೆಂಪು ಬಾನು
ನೀರಿನಬ್ಬರದ ಸದ್ದು ಅನುಭವಿಸಲೂ ಕಾಲಮಿತಿಯುಂಟು
ಕತ್ತಲಾದ ಬಳಿಕ ಉಳಿಯುವುದು
ಗೂಟಕ್ಕೆ ಕಟ್ಟಿದ ದೋಣಿ ಮತ್ತೆ ನಿರ್ಲಿಪ್ತ ಹೆಬ್ಬಂಡೆ ಮಾತ್ರ!

No comments: