ಬೀಗ ಧರಿಸಿದ ದಾರಿ....

ತಿಂಗಳುಗಟ್ಟಲೆಯ ಅಜ್ನಾತವಾಸದ ಬಳಿಕ ಆತ ಯಾರಿಗೂ ಹೇಳದೆ ರಸ್ತೆಯುದ್ದಕ್ಕೂ ಹೊರಟ. ವರ್ಷಾನುಗಟ್ಟಲೆ ಟಾರ್ಪಲಿನ್ ಮುಚ್ಚಿಟ್ಟು ತೆಗೆದ ವಾಹನದ ಹಾಗೆ ಕಂಡಿತು ಉದ್ದಕ್ಕೂ ಬಿದ್ದುಕೊಂಡಿದ್ದ ರಸ್ತೆ. ಕಾಂಪೌಂಡ್ ಬಿಟ್ಟು ಹೊರಗೇ ವಾರಗಟ್ಟಲೆ ಕಾಲಿರಿಸದೇ ಇದ್ದ ಆತನಿಗೆ ಎಲ್ಲವೂ ಹೊಸದಾಗಿ ತೋರುತ್ತಿತ್ತು.

ರಸ್ತೆಯುದ್ದಕ್ಕೆ ನಡೆಯುವುದು ಸಹ. ಶತಮಾನಗಳಿಂದ ಯಾರೂ ಬಂದಿಲ್ಲವೇನೋ ಅನ್ನಿಸುವಂತೆ ಬಸ್ ಸ್ಟ್ಯಾಂಡ್ ಕಟ್ಟಡದ ಸುತ್ತ ಹುಲ್ಲು ಬೆಳೆದಿತ್ತು, ನಾಲ್ಕಾರು ನಾಯಿಗಳು ಹಾಯಾಗಿ ಒಳಗೆ ವಿಶ್ರಾಂತಿ ಪಡೆದಿದ್ದವು. ಬಸ್ ಸ್ಟ್ಯಾಂಡ್ ಒಳಗೆ ಸಂಪರ್ಕ ಕಲ್ಪಿಸುವ ಕಾಲು ದಾರಿಯ ಸವೆದ ಗುರುತೇ ಮಾಯವಾಗಿ ಕುರುಚಲು ಪೊದೆ ಆವರಿಸಿತ್ತು.

ವಾರಗಳ ಹಿಂದೆ ಕುಡಿದು ಖಾಲಿಯಾದ ಸೋಡಾ ಶೀಷೆಗಳನ್ನು ಬದಲಿಸದೆ ತುಕ್ಕು ಹಿಡಿಯುತ್ತಿದ್ದ ಪೆಟ್ಟಿಗೆ ಅಂಗಡಿ ಹೊರಗೆ ಅನಾಥವಾಗಿ ಬಿದ್ದುಕೊಂಡಿತ್ತು. ರಸ್ತೆಯ ಅಕ್ಕಪಕ್ಕ ಚೆಲ್ಲಿದ್ದರೂ ನಜ್ಜುಗುಜ್ಜಾಗದೆ, ಹಾನಿಗೊಳಗಾಗದೆ ಮೇ ಫ್ಲವರ್ ನ ರಾಶಿ ನಿರ್ಭಯವಾಗಿ ಫುಟ್ಬಾತ್ ಮೇಲೆ ಪವಡಿಸಿತ್ತು. ರಸ್ತೆಗೂ, ಬಸ್ ಬೇಗೂ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ.

ಇನ್ನೆಷ್ಟೋ ದಿನಕ್ಕೆ ನಾನಿಲ್ಲ ಎಂಬಂತೆ ರಾಗಿಬೆಣ್ಣೆ ದೋಸೆ ತಿನ್ನುತ್ತಿದ್ದ ಹೊಟೇಲಿನ ಬೋರ್ಡಿನ ಮೊಳೆ ಕಳಚಿ ಒಂದು ಪಕ್ಕಕ್ಕೆ ಓಲಾಡಿಗೊಂಡಿತ್ತು. "ಗಂಜಿ ಊಟ ರೆಡಿ ಇದೆ" ಎಂದು ಬರೆದ ಮಾಸಲು ತಗಡಿನ ಶೀಟಿನ ಮೇಲೆ ಪಾಚಿ ಕಟ್ಟಿತ್ತು.

ಬೀದಿಗೆ ಒಂದೇ ಎಂಬಂತೆ ಇದ್ದ ಥಿಯೇಟರಿನ ಬೀಗ ಜಡಿದ ಗೇಟಿನ ಮೇಲೆ ಇಂದಿನ ಚಿತ್ರ ಪ್ರದರ್ಶನ ರದ್ದುಪಡಿಸಲಾಗಿದೆ ಎಂಬ ಬೋರ್ಡು ಶಾಶ್ವತವೇನೋ ಎಂಬಂತೆ ರಾರಾಜಿಸುತ್ತಿತ್ತು. ಪಾನೀಪುರಿ, ಚರ್ಮುರಿ, ಮುಂಬೈವಾಲಾಗಳ ಭೇಲುಪುರಿ ಅಂಗಡಿ, ಜ್ಯೂಸು ಸೆಂಟರು, ಕಬ್ಬಿನಹಾಲು, ಐಸ್ ಕ್ರೀಮ್ ಎಲ್ಲ ಸಿಗ್ತಾ ಇದ್ದ ರಸ್ತೆಯ ಅಂಚಿನಲ್ಲಿ ಗಾಳಿ ಕಳೆದುಕೊಂಡ ಚಕ್ರಗಳೊಂದಿಗೆ ಗಾಡಿಗಳು ಮುಷ್ಕರ ಹೂಡಿದಂತೆ ಸಾಲು ಸಾಲಾಗಿ ನಿಂತುಕೊಂಡಿದ್ದವು, ಹಿಂದೊಮ್ಮೆ ಸಂಜೆಗಳ ಧೂಳೆಬ್ಬಿಸುವಂತೆ ವ್ಯಾಪಾರ ಮಾಡುತ್ತಾ ಇದ್ದದ್ದು ತಾವೇ ಎಂಬ ನಿರ್ವಿಕಾರ ನೆನಪಿನೊಂದಿಗೆ.

ಪೆಟ್ರೋಲ್ ಬಂಕ್ ನ ಅಕ್ಕಪಕ್ಕ ಬದಿಯ ಟಾರ್ಪಲಿನ್ ಇಳಿಬಿಟ್ಟ ಸ್ಥಿತಿಯಲ್ಲಿ ದಯನೀಯವಾಗಿ ಪಾರ್ಕ್ ಮಾಡಲ್ಪಟ್ಟ ಪ್ರೈವೇಟ್ ಬಸ್ಸುಗಳು ಮೂಕರೋಧನದ ಪ್ರತಿಬಿಂಬಗಳಂತೆ ಕಾಣುತ್ತಿದ್ದವು...

ಓವರ್ ಟೇಕು, ಸಿಗ್ನಲ್ಲು, ಟೋಲು ಯಾವುದೂ ಇಲ್ಲದ ರಸ್ತೆಯಲ್ಲಿ ರಸ್ತೆಯ ನಿಯಮಗಳೇ ಬದಲಾದವೋ ಎಂಬಂತೆ ಅಚ್ಚರಿಗಳೊಡನೆ ವಿಚಿತ್ರ ನಿಶ್ಯಬ್ಧ ಮನೆ ಮಾಡಿತ್ತು.

ಅದೋ...
ರಸ್ತೆಯ ತುದ್ದತುದಿಯಲ್ಲಿ ನಾಲ್ಕಾರು ಬ್ಯಾರಿಕೇಡು, ಹತ್ತಾರು ಪೊಲೀಸರು. ತಡೆದು ನಿಲ್ಲಿಸಿದರು.
"ಎಲ್ಲಿಗೆ ಹೋಗ್ತಿದೀರ? ಯಾಕೆ ಹೋಗ್ತಿದೀರ? ಪಾಸ್ ಇದೆಯಾ?"
ಛೆ ನೆನಪೇ ಬರ್ತಾ ಇಲ್ಲ. ಎಲ್ಲಿಗೆ ಹೊರಟದ್ದೆಂದು, ಮನೆ ಬಾಗಿಲು ದಾಟುವಾಗ ನೆನಪಿತ್ತಲ್ಲವೇ.
ಆಚೆ ಬದಿಯ ರಸ್ತೆಗೆ ಹೋಗಬೇಕೆಂದುಕೊಂಡು ಬಾಯಿ ತೆರೆಯಲು ಪ್ರಯತ್ನಿಸಿದವನಿಗೆ ಗಂಟಲಿನಿಂದ ಸ್ವರವೇ ಹೊರಡುತ್ತಿಲ್ಲ. ಎಷ್ಟು ಪ್ರಯತ್ನಿಸಿದರೂ ನಾಲಗೆ ಹೊರಳುತ್ತಿಲ್ಲ... ಸ್ತಂಭೀಭೂತನಾಗಬೇಕಾಯಿತು. ಅರೆ, ನನಗೆ ಮಾತೂ ಮರೆತುಹೋಯಿತೆ...
"ಹೋಗಿ... ಹೋಗಿ.. ಗೊತ್ತಿಲ್ಲವ ನಿಮಗೆ ಹೀಗೆಲ್ಲ ಓಡಾಡಬಾರದು" ಎಂದು. ಗದರಿಸಿ ವಾಪಸ್ ಕಳುಹಿಸಿದರು.
ಮತ್ತವೇ ನಿರ್ಜೀವ ಪ್ರತೀಕಗಳನ್ನು ಹೊತ್ತ ಸಾಕ್ಷಿಗಳ ನಡುವೆ ಕಾಲೆಳೆದುಕೊಂಡು ಹೊರಟವನಿಗೆ ಬಂದ ದಾರಿಯೇ ಮರೆತೇ ಹೋಗಿತ್ತು..." ರಸ್ತೆಯಲ್ಲೇ ನಾನು ಹೊಗ್ತಾ ಇದ್ದೇನಾ? ರಸ್ತೆಯೇ ನನ್ನನ್ನು ಕರೆದೊಯ್ಯುತ್ತಾ ಇದೆಯಾ...?" ಅಂತ ಸಂಶಯ ಶುರುವಾಯಿತು!!

-ಕೃಷ್ಣಮೋಹನ ತಲೆಂಗಳ.

No comments: