ಭಾಷಣ, ಸ್ಟೇಟಸ್ಸುಗಳ ದಾಟಿ ಹೋಗದ “ಸಭ್ಯತೆ” ಎಂಬ ಅನುಕೂಲ ಶಾಸ್ತ್ರ!

 



ಇತ್ತೀಚೆಗೆ ಒಂದು ಬಯಲಾಟಕ್ಕೆ ಹೋಗಿದ್ದೆ. ಆಟ ಶುರುವಾಗವ ಮೊದಲೇ, ಕೊನೆ ತಕನ ಸರಿಯಾದ ವೀಕ್ಷಣೆ ಉದ್ದೇಶದಿಂದ ಖಾಲಿ ಇರುವಾಗಲೇ ಎದುರು ಹೋಗಿ ಕುಳಿತಿದ್ದೆ. ನನ್ನ ಹಿಂದೆ ಒಂದು ಕುಟುಂಬದವರು ಇಡೀ ಆಟವನ್ನು ಸ್ಪಷ್ಟವಾಗಿ ನೋಡುವ ಉದ್ದೇಶದಿಂದ ನನ್ನಂತೆಯೇ ಆರಂಭದಲ್ಲೇ ಬಂದು ಕುಳಿತಿದ್ದರು. ಕಟೀಲು ಮೇಳದ ಆಟದಲ್ಲಿ ರಾತ್ರಿ 8 ಗಂಟೆ ಹೊತ್ತಿಗೆ ಅನ್ನಸಂತರ್ಪಣೆ ಸಾಮಾನ್ಯವಾಗಿ ಇರುತ್ತದೆ. ಹಾಗಾಗಿ ಆ ಕುಟುಂಬದವರು (ಸಣ್ಣ ಮಕ್ಕಳೂ ಇದ್ದರು). ಊಟ ಮಾಡಿ ಬರುವ ತನಕ ಕುರ್ಚಿಗೆ ಶಾಲು ಇರಿಸಿ, ಸೀಟು ಕಾಯ್ದಿರಿಸಿ ಹೋದರು. ಆಟಕ್ಕೆ ತುಂಬ ಮಂದಿ ಬಂದಿದ್ದರು. ಸ್ಟ್ಯಾಂಡಿಂಗೂ ಇತ್ತು. ಈ ಪೈಕಿ ತಡವಾಗಿ ಬಂದವನೊಬ್ಬ ನೇರ ಬಂದು ಕಾಯ್ದಿರಿಸಿದ ಶಾಲು ಸರಿಸಿ ಕೂತೇ ಬಿಟ್ಟ, ಜೊತೆಗೆ ಅಕ್ಕಪಕ್ಕದಲ್ಲಿ ಕಾಯ್ದಿರಿಸಿದ ಸೀಟುಗಳನ್ನೂ ಲೆಕ್ಕಿಸದೆ ತನ್ನವರನ್ನೂ ಕೂರಿಸಿದ. ನನ್ನ ಪಕ್ಕದಲ್ಲಿದ್ದವರು, ಅಲ್ಲಿ ಜನ ಇದ್ದಾರೆ, ಊಟ ಮಾಡಿ ಬರ್ತಾರೆ ಅಂದ್ರೆ ಕೇಳ್ಲೇ ಇಲ್ಲ. ಕೆಕ್ಕರಿಸಿ ನೋಡಿದ. ಏನೋ ಉಲ್ಟಾ ಮಾತನಾಡಿದ. ಇದೆಲ್ಲ ಸಂಗತಿಯೇ ಅಲ್ಲ. ತಾನೊಬ್ಬ ಭಯಂಕರ ಜನ ಎಂಬ ಹಾಗೆ ಅಸಭ್ಯ ಪೋಸು ಬೇರೆ...!

ಕೊನೆಗೆ ಊಟಕ್ಕೆ ಹೋದವರು ಬಂದರು, ಏನೋ ಪಾಪ, ಪುಣ್ಯ ಕಂಡಿತೋ ಏನೋ. ಪರಿಪರಿಯಾಗಿ ಆತನನ್ನು ಮೆಚ್ಚಿಸಿ ಮನವರಿಕೆ ಮಾಡಿದ ಬಳಿಕ ಉದಾರವಾಗಿ ಸೀಟು ಬಿಟ್ಟು ಕೊಟ್ಟು ದೊಡ್ಡ ವಿಲನ್ ಥರ ಮುಸುಡು ಮಾಡಿಕೊಂಡು ಹೋದ.

ಇಲ್ಲಿ ವಿಷಯ ಏನು ಅಂದರೆ, ಆಟಕ್ಕೆ ಬೇಗ ಬಂದವರಿಗೆ ಊಟಕ್ಕ ಹೋಗುವ ಹತ್ತು ನಿಮಿಷ ಸೀಟು ಕಾಯ್ದಿರಿಸುವ ಸ್ವಾತಂತ್ರ್ಯ ಇಲ್ಲವೇ...? ತಡವಾಗಿ ಬಂದರೆ ಸಹಜವಾಗಿ ಸೀಟು ಸಿಗುವುದಿಲ್ಲ. ಅಂಥವರಿಗೆ ನಿಂತು ನೋಡುವ ಅಥವಾ ಸೀಟು ಖಾಲಿಯಾಗುವ ವರೆಗೆ ತಾಳ್ಮೆ ಬೇಕಲ್ಲವೇ...? ಇನ್ನೂ ಕೆಲವರಿದ್ದಾರೆ. ಈ ಸೀಟು ನಿಮ್ಮ ಅಪ್ಪಂದ, ಇಲ್ಲಿ ನಿಮ್ಮ ಹೆಸರು ಬರೆದಿದೆಯಾ, ಎಲ್ಲ ಸೀಟು ನೀವೇ ಬುಕ್ ಮಾಡಲು ಏನಿದು, ನಿಮ್ಮ ಸ್ವಂತದ್ದಅಂತೆಲ್ಲ ಕಣ್ಣು ದೊಡ್ಡ ಮಾಡಿ, ರೌಡಿಗಳ ಥರ ಮಾತಾಡಿ ಹೆದರಿಸಿ ಕೂರುವವರು.

ತಡವಾಗಿ ಬಂದದ್ದು ಅವರದ್ದೇ ತಪ್ಪು. ಅನಿವಾರ್ಯವಾಗಿ ತಡವಾಯಿತು ಅಂತಲೇ ಇಟ್ಟುಕೊಳ್ಳೋಣ. ಬೇಗ ಬಂದು ಸೀಟು ಕಾಯ್ದಿರಿಸಿದವರ ಭಾವನೆಗೆ ಗೌರವ ಕೊಡಬೇಕು. ಅಥವಾ ವಿನಂತಿಸಿ ಕೂರಬೇಕು, ಅಥವಾ ಅವರು ಹೋಗುವ ತನಕ ಕಾದು ಕುಳಿತು ಕೂರಬೇಕು ಅನ್ನುವ ಕನಿಷ್ಠ ಸಭ್ಯತೆ ಇಲ್ಲ. ಇನ್ನೊಂದು ವಿಪರ್ಯಾಸ ಅಂದರೆ, ಇಷ್ಟೆಲ್ಲ ರೋಪ್ ಹಾಕಿ ಕೂರುವವರು ಇಡೀ ಆಟ ಖಂಡಿತಾ ನೋಡುವುದಿಲ್ಲ. ಊಟಕ್ಕಂತಲೇ ಬಂದವರು, ಮರ್ಯಾದೆಯ ಪ್ರಶ್ನೆ ಅಂತ ಸ್ವಲ್ಪ ಹೊತ್ತು ಕುಳಿತು, ಅತ್ತ ಆಟವನ್ನೂ ನೋಡದೆ, ಇತ್ತ ಇತರ ಪ್ರೇಕ್ಷಕರ ಭಾವನೆಗೂ ಬೆಲೆ ಕೊಡದೆ ದಾಂದಲೆ ಎಬ್ಬಿಸಿ ಗಮನ ಸೆಳೆಯುವವರು.

ಇದೊಂದು ಉದಾಹರಣೆ ಮಾತ್ರ. ನಾಗರಿಕರು, ಸಭ್ಯರು ಅನ್ನಿಸಿಕೊಂಡ ನಾವು ಇಂತಹ ಹತ್ತಾರು ಅಹಂಕಾರಗಳನ್ನು, ಅಪಸವ್ಯಗಳನ್ನು ಮಾಡುತ್ತಲೇ ಬರುತ್ತೇವೆ. ಪಬ್ಲಿಕ್ ಪ್ಲೇಸ್ ಅಂದರೆ ಯಾರಪ್ಪನ ಆಸ್ತಿ ಎನ್ನುವ ಅಹಂಕಾರ ಇದಕ್ಕೇ ಕಾರಣ. ನಮ್ಮಲ್ಲಿ ಶೇ.90 ಮಂದಿ, ಹಾಗೂ ನಮ್ಮ ಪ್ರತಿಯೊಬ್ಬರೊಳಗೂ ಸ್ವಲ್ಪವಾದರೂ ಇಂತಹ ಉಡಾಫೆ, ಅಹಂಕಾರ ತುಂಬಿರುತ್ತದೆ. ಇವನ್ನು ಉದ್ದುದ್ದ ಹೇಳುವ ಬದಲು ಪಾಯಿಂಟ್ ಬೈ ಪಾಯಿಂಟ್ ಬರೆದರೆ ಹೆಚ್ಚು ನಿಖರವಾದೀತು:

1)      ಯಕ್ಷಗಾನಕ್ಕೆ ಬರುವುದು. ಪರಿಚಯದ ಹಿನ್ನೆಲೆಯಲ್ಲಿ ಪಕ್ಕವೇ ಕೂರುವುದು. ನಾವು ವೀಡಿಯೋ ಮಾಡುತ್ತಲೋ, ಫೋಟೋ ತೆಗೆಯುತ್ತಲೋ ಅಥವಾ ತನ್ಮಯರಾಗಿ ಆಟ ನೋಡುತ್ತಿರುವಾಗ ಮುಟ್ಟಿ ಮುಟ್ಟಿ ಮಾತನಾಡಿಸುವುದು, ಆಗಾಗ ಈ ಆಟವನ್ನು ಬೇರೆ ಆಟದ ಜೊತೆ ಹೋಲಿಸಿ ಹೋಲಿಸಿ ತಲೆ ತಿನ್ನುವುದು. ಆತ ಆಟ ನೋಡುವುದಿಲ್ಲ, ನಮಗೂ ಆಟ ನೋಡಲು ಬಿಡುವುದಿಲ್ಲ. ಮಾಡುವಷ್ಟು ಉಪದ್ರ ಮಾಡಿ ಕೊನೆಗೆ ಅನ್ನ ಸಂತರ್ಪಣೆ ಆದ ಬಳಿಕ ಅರ್ಧದಲ್ಲೇ ತೆರಳುವುದು!!!.

2)      ಯಕ್ಷಗಾನದ ಒಂದು ಭಾಗವತಿಕೆ ಪದ ರೆಕಾರ್ಡ್ ಮಾಡುವುದು. ಅದನ್ನು ಅಲ್ಲಿಯೇ ಇತರರಿಗೆ ಉಪದ್ರ ಆಗುವ ಹಾಗೆ ದೊಡ್ಡದಾಗಿ ಪ್ಲೇ ಮಾಡುವುದು. ಅಥವಾ ಆಟದಲ್ಲೇ ಕುಳಿತು ಬಿಸಿನೆಸ್ ವಿಷಯದಲ್ಲಿ ಕಾಲ್ ಮಾಡಿ ದೊಡ್ಡಕ್ಕೆ ಮಾತನಾಡುವುದು ಅಥವಾ ವೀಡಿಯೋ ಕಾಲ್ ಮಾಡಿ ಮನೆಯವರ ಜೊತೆ ದೊಡ್ಡದಾಗಿ ಮಾತನಾಡುತ್ತಾ ಇರುವುದು.

3)      ಬಸ್ ನಿಲ್ದಾಣಗಳಲ್ಲಿ, ಮದುವೆ ಹಾಲ್ ಗಳಲ್ಲಿ ಪಾಯಿಖಾನೆಗ ಹೋದಾಗ ನೀರು ಹಾಕದೇ ಬರುವುದು (ಇಂದು ಕ್ಷುಲ್ಲಕ ಅನ್ನಿಸಿದರೂ ಭಯಂಕರ ಸಮಸ್ಯೆ). ಮೂತ್ರ ಮಾಡಲಿ, ಇನ್ನೊಂದು ಮಾಡಲಿ ನೀರು ಹಾಕುವವರ ಸಂಖ್ಯೆ ಅತ್ಯಂತ ಕಡಿಮೆ. ಇದು ಪಬ್ಲಿಕ್ ಟಾಯ್ಲೆಟ್ ಅಲ್ವ, ಯಾರಾದ್ರೂ ಹಾಕುತ್ತಾರೆ ಬಿಡಿ ಎಂಬ ಸೊಕ್ಕಿನಿಂದ ಗಲೀಜು ಮಾಡಿ ಬಂದು ಮತ್ತೊಬ್ಬರು ಅತ್ತ ಕಾಲಿಡದ ಹಾಗೆ ಮಾಡುವುದು. ಅದೇ ಪಾಯಿಖಾನೆ ಅವರ ಮನೆಯದ್ದಾದರೆ ಹಾಗೆ ಮಾಡಿಯಾರ?!

4)      ದೇವಸ್ಥಾನದಲ್ಲೂ ಹಾಗೆ, ಇಲ್ಲಿ ಮೊಬೈಲ್ ಬಳಕೆ ನಿಷಿದ್ಧ ಅಂತ ಬೋರ್ಡ್ ಇದ್ದರೂ ಸೈಲೆಂಟ್ ಮೋಡ್ ನಲ್ಲಿ ಇರಿಸುವುದಿಲ್ಲ. ಆಗಾಗ ವಿಡೀಯೋ ಕಾಲ್ ಮಾಡಿ ದೊಡ್ಡದಾಗಿ ಮನೆಯವರ ಜೊತೆ ಮಾತನಾಡುವುದು. ದೇವಸ್ಥಾನದಲ್ಲಿ ಕೊಟ್ಟ ಗಂಧ ಪ್ರಸಾದವನ್ನು ಅಲ್ಲಿನ ಗೋಡೆಗೆ, ಕಂಭಕ್ಕೆ ಕೆಟ್ಟದಾಗಿ ಒರೆಸುವುದು. ಅನ್ನಸಂತರ್ಪಣೆ ಹಾಲ್ ನಲ್ಲಿ ಸಣ್ಣ ಸಣ್ಣ ಲೋಪಗಳಿಗೂ ಬಡಿಸುವವರ ಜೊತೆ ಜಗಳ ಮಾಡುವುದು, ಕ್ಯೂ ತಪ್ಪಿಸಿ ಓಡುವುದು, ಎಲ್ಲರ ಊಟ ಮುಗಿಯುವ ಮೊಜದಲೇ ಪಂಕ್ತಿಯಿಂದ ಅಸಭ್ಯವಾಗಿ ಎದ್ದು ರಂಪಾಟ ಮಾಡುವುದು.

5)      ಸಭೆ, ಸಮಾರಂಭಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಉತ್ಸವಗಳಲ್ಲಿ ವಾಹನ ನಿಲುಗಡೆಗೆ ಒಂದು ಸೂಚನೆ ಅಂತ ಇರ್ತದೆ. ಅಲ್ಲಿ ಬೇಕೆಂದೇ ಅಡ್ಡಾದಿಡ್ಡಿಯಾಗಿ ಕಾರು ಪಾರ್ಕ್ ಮಾಡುವುದು. ಆಚೆ ಕಡೆಯಿಂದ ವಾಹನ ಆಗಮಿಸಲು ಒಂದು ದಾರಿ ಬಿಟ್ಟಿದ್ದರೆ ಅಲ್ಲಿಯೇ ಕೊಂಡು ಹೋಗಿ ಅಡ್ಡಲಾಗಿ ತನ್ನ ಕಾರು ನಿಲ್ಲಿಸುವುದು. ಕಾರು ನಿಲ್ಲಿಸಬೇಕಾದ ಜಾಗದಲ್ಲಿ ಅಡ್ಡಾದಿಡ್ಡಿ ಬೈಕ್ ನಿಲ್ಲಿಸುವುದು ಹಾಗೂ ಬೈಕ್ ಹ್ಯಾಂಡ್ ಲಾಕ್ ಹಾಕಿ ಹೋಗಿ, ಯಾರೂ ಅದನ್ನು ಬದಿಗೆ ಸರಿಸದ ಹಾಗೆ ಮಾಡಿ ಇಡುವುದು... ಯೋಚಿಸಿ ನೋಡಿ, ಅಲ್ಲಿಗೆ ಬರುವ ಪ್ರತಿಯೊಬ್ಬರೂ ಇಂತಹ ಉಡಾಫೆಯವರೇ ಆಗಿದ್ದರೆ ಪಾರ್ಕಿಂಗ್ ವ್ಯವಸ್ಥೆ ಹೇಗಿರಬಹುದು?!.

6)      ಸಾರ್ವಜನಿಕ, ಕೌಟುಂಬಿಕ ಸಮಾರಂಭಗಳಲ್ಲಿ ಮದುವೆ ವಯಸ್ಸು ಮೀರಿ ಮದುವೆ ಸಂಬಂಧ ಕುದುರದವರಲ್ಲಿ, ಅವರ ಹೆತ್ತವರಲ್ಲಿ ನೇರವಾಗಿ ಕಣ್ಣಿಗೆ ಕೈ ಹಾಕಿದ ಹಾಗೆ, ಇನ್ನೂ ಮದುವೆ ಆಗಿಲ್ವ, ಯಾಕೆ ಆಗಿಲ್ಲ? ಜಾತಕ ತೋರ್ಸಿದ್ರ, ಕೂಡಿ ಬರುದಿಲ್ವ, ಜೋಯಿಷರನ್ನು ಕಂಡ್ರ? ಎಷ್ಟು ಸಂಬಂಧ ಕುದುರಿದೆ?” ಅಂತೆಲ್ಲ ಕೆಟ್ಟದಾಗಿ ಬಾಯಿ ತೀಟೆ ತೀರಿಸಲು ಕೇಳುವುದು. ದೇವರ ದಯದಿಂದ ಮದುವೆ ಆಗಿ ಮಕ್ಕಳಾಗಲು ಬಾಕಿ ಇದ್ದರೆ, ಯಾಕೆ ಮಕ್ಕಳಾಗಲು ಲೇಟು?” ಅಂತ ಕೇಳುವುದು. ಮಗುವೂ ಹುಟ್ಟಿದರೆ ಒಂದು ಮಗಳು ಸಾಕ, ಇನ್ನೊಂದು ಬೇಡ್ವ?” ಅಂತ ಮಾರ್ಕೆಟಿಂಗ್ ಕಂಪನಿಯವರ ಥರ ಟಾರ್ಗೆಟ್ಟು ನೀಡುವುದು, ಧರ್ಮ ಉಳಿಸುವ ಭಾವನಾತ್ಮಕ ದಾಳಗಳನ್ನು ಎಸೆಯುವುದು, ಡೈವೋರ್ಸಿ ಅಥವಾ ಪತಿ ಅಗಲಿದವ ಬಳಿ ನೇರವಾಗಿ ನೀವು ಪುನಃ ಮದುವೆ ಆಗಿಲ್ವ, ಈಗ ಎಲ್ಲಿದ್ದೀರಿ, ಭಯಂಕರ ಕಷ್ಟ ಅಲ್ವ?” ಅಂತೆಲ್ಲ ನಾಲ್ಕು ಜನರ ಎದುರೇ ಕೇಳುವುದು.

ಇಂಥವರ್ಯಾರೂ ನಿಮ್ಮ ಕಷ್ಟ ಕಾಲದಲ್ಲಿ ಉಪಕಾರ ಮಾಡುವವರಲ್ಲ.  ಮಾತನಾಡುವ ಚಟ ಹಾಗೂ ಇತರರ ಬದುಕಿಗೆ ಇಣುಕುವ ಕೆಟ್ಟ ಕುತೂಹಲ ಅವರನ್ನು ಮಾತನಾಡಿಸುತ್ತದೆ ಅಷ್ಟೇ.. ಅವರಿಗೆ ನೀವು ಕೊಡುವ ಉತ್ತರವೂ ಮುಖ್ಯ ಆಗಿರುವುದಿಲ್ಲ. ನಿಮ್ಮ ಕುರಿತು ಆಡಿಕೊಳ್ಳುವುದೇ ಪ್ರಧಾನವಾಗಿರುತ್ತದೆ.

7)      ನಾಲ್ಕು ಜನ ಸೇರಿದಲ್ಲಿ ನೇರವಾಗಿ ನಿನಗೆಷ್ಟು ಸಂಬಳ?” ಅಂತ ಕೇಳುವುದು. ಎಷ್ಟು ಖರ್ಚು ಬರ್ತದೆ?” ಅಂತ ಕೇಳುವುದು. ಪರೋಕ್ಷವಾಗಿ ನಾವೆಷ್ಟು ಉಳಿತಾಯ ಮಾಡುತ್ತೇವೆ ಎಂಬ ಕೆಟ್ಟ ಕುತೂಹಲವನ್ನು ಅದುಮಿಟ್ಟುಕೊಳ್ಳಲಾಗದೆ ಬಡಬಡಿಸುವುದು.

8)      ನಿಮಗೇನೂ ಆರಾ...... ಮ ಅಲ್ವ ಕೆಲಸ. ಮಧ್ಯಾಹ್ನ 3 ಗಂಟೆಗೆ ಆಫೀಸಿಗೆ ಹೋದ್ರಾಯ್ತು... ಎಷ್ಟು ಚಂದ ಅಲ್ವ?” ಅಂತ ರಾಗ ಎಳೆಯುವುದು. ನೈಟ್ ಶಿಫ್ಟಿನವ ಪೂರ್ವಾಹ್ನ ಎಲ್ಲಾದರೂ ಪೇಟೆಯಲ್ಲಿ ಸಿಕ್ಕರೆ ಇವತ್ತು ರಜೆಯ ಅಂತ ಕೇಳುವುದು. ಸಾವಿರದ ಒಂದನೇ ಸಲ ಸಿಕ್ಕರೂ ಅದೇ ಪ್ರಶ್ನೆ. ಬೇರೆಯವರ ವೃತ್ತಿ, ವೃತ್ತಿಯ ಟೈಮಿಂಗ್ಸ್, ಅದರ ಹಿಂದಿರುವ ಕಷ್ಟಗಳು, ಒತ್ತಡಗಳು, ವೈಯಕ್ತಿಕ ಸಮಸ್ಯೆಗಳು, ಟಾರ್ಗೆಟ್ಟುಗಳು, ರಜೆಗಳ ಅಭಾವ, ಮಾಡಬೇಕಾದ ತ್ಯಾಗಗಳು ಯಾವುದರ ಬಗ್ಗೆಯೂ ಲವಲೇಶ ಯೋಚಿಸದೆ ಕತ್ತೆಗಳ ಹಾಗೆ ಕೇವಲ ಚಾಟಿಂಗ್ ಮೆಷಿನ್ ಗಳ ಥರ ಮಾತನಾಡ್ತಾ ಹೋಗುವುದು. ಅವರಿಗೆ ತನ್ನ ವೃತ್ತಿ, ತನ್ನ ಸಮಯ ಹಾಗೂ ತನ್ನ ಒತ್ತಡಗಳೇ ಶ್ರೇಷ್ಠ., ಜಗತ್ತಿನ ಇತರರೆಲ್ಲ ಹಾಯಾ.......ಗಿ ಬದುಕುವವರು ಎಂಬ ಭಾವ ಇರುತ್ತದೆ. ಇಂತವರ ಜೊತೆ ಜಗಳ ಮಾಡುವುದು, ತಿಳಿ ಹೇಳುವುದು, ಕಷ್ಟಗಳನ್ನು ಶೇರ್ ಮಾಡುವುದು ಅತ್ಯಂತ ವ್ಯರ್ಥ ಪ್ರಯತ್ನ ಅಷ್ಟೇ...

9)      ಒಂದು ಜಾಗಕ್ಕೆ ಇಂತಿಷ್ಟು ಹೊತ್ತಿಗೆ ಬರುತ್ತೇನೆ ಅಂತ ಹೇಳುವುದು. ಅಷ್ಟೊತ್ತಿಗೆ ಬರಲಿಕ್ಕಿಲ್ಲ, ಕನಿಷ್ಠ ಬರಲು ಆಗುವುದಿಲ್ಲ ಅಂತ ಹೇಳಲಿಕ್ಕೂ ಇಲ್ಲ. ಲೇಟಾಗುವ ಲಕ್ಷಣ ಇದ್ದರೆ ಅತನ್ನು ತಿಳಿಸುವಷ್ಟೂ ವ್ಯವಧಾನ ಇಲ್ಲ. ಸತ್ಯ ನಂಬಿ ನಾವು ಸಮಯಕ್ಕೆ ಸರಿಯಾಗಿ ಬಂದು ಅವರಿಗೋಸ್ಕರ ಗಂಟೆಗಟ್ಟಲೆ ಕಾದರೂ ಆ ಬಗ್ಗೆ ಲವಲೇಶವೂ ಪಶ್ಚಾತ್ತಾಪ ಇಲ್ಲ.

10)   ತನ್ನ ವೈಯಕ್ತಿಕ ಇಷ್ಟಗಳು, ತನ್ನ ನಂಬಿಕೆಗಳು, ತನ್ನ ಸಿದ್ಧಾಂತಗಳು ಮಾತ್ರ ಸತ್ಯ. ಜಗತ್ತಿನ ಇತರ ಎಲ್ಲ ಆಗುಹೋಗುಗಳು ನಾಟಕ ಎಂಬ ಉಡಾಫೆ. ಇದೇ ಕಾರಣಕ್ಕೆ ತನಗೆ ಮಾತ್ರ ಸರಿ ಕಂಡ ವಿಚಾರಕ್ಕೆ ಕಂಡ ಕಂಡವರಲ್ಲಿ ಚರ್ಚೆಗೆ, ಮೊಂಡು ವಾದಕ್ಕೆ ಇಳಿಯುವುದು. ಇತರರು ಹೇಳುವುದನ್ನು, ವಿವರಿಸುವುದನ್ನು ಕೇಳುವಷ್ಟೂ ವ್ಯವಧಾನ ಇಲ್ಲ. ತಾನು ನಂಬಿದ್ದೇ ಸರಿ ಎಂಬ ಭಯಂಕರ ಉದ್ಧಟತನ. ಫೇಸ್ಬುಕ್ಕು, ಸಭೆ, ಸಮಾರಂಭ, ಮೀಟಿಂಗುಗಳಲ್ಲಿ ಅರಚುತ್ತಿರುವ ಇಂಥವರು ಕಟ್ಟಕಡೆಯದಾಗಿ ಯಾವ ಸಿದ್ಧಾಂತವನ್ನೂ ಪಾಲಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ವರ್ತಿಸುತ್ತಾರೆ. ಆದರೆ ನಾಲ್ಕು ಜನ ಸೇರಿದಲ್ಲಿ ತಾನೂ ಒಬ್ಬ ಜನ ಅಂತ ತೋರಿಸುವ ಹುಚ್ಚು.

 

ಈ ಹತ್ತು ಪಾಯಿಂಟುಗಳು ಆರಿಸಿ ತೆಗೆದ ವಿಚಾರಗಳಷ್ಟೇ... ಇಂತಹ ನೂರು ಅಪಸವ್ಯಗಳು ನಮ್ಮೊಳಗೆ ಬೆಸೆದುಕೊಂಡಿವೆ. ಕೆಲವೊಮ್ಮೆ ಅದು ನಮಗೆ ಗೊತ್ತಾಗ್ತದೆ. ಕೆಲವೊಮ್ಮೆ ಗೊತ್ತುಗುವುದಿಲ್ಲ. ನನ್ನ ಹಾಗೆ ಇಡೀ ಜಗತ್ತಿನ ಪ್ರತಿಯೊಬ್ಬರಿಗೂ ಒಂದು ಬದುಕು ಇದೆ. ವೈಯಕ್ತಿಕ ಸ್ಪೇಸ್ ಇದೆ. ಅವರವರ ಕೆಲಸದ ಕಷ್ಟ ಅವರವರಿಗೆ ಇದ್ದ ಇದೆ. ಹೊಟ್ಟೆಪಾಡಿಗೆ ಏನೋ ದುಡಿಯುತ್ತಾರೆ. ಅದರಲ್ಲಿ ಸವಾಲುಗಳಿರ್ತವೆ. ಸಮಯದ ಮಿತಿ, ಒತ್ತಡ ಇರ್ತವೆ. ಜೊತೆಗೆ ವೈಯಕ್ತಿಕ ಸಮಸ್ಯೆಗಳಿರ್ತವೆ ಅಂತ ಯೋಚಿಸುವುದೇ ಇಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರ ಜೊತೆ ಹೊಂದಿಕೊಂಡೂ, ಯಾರಿಗೂ ಉಪದ್ರ ಆಗದ ಹಾಗೆ ವರ್ತಿಸಬೇಕಾಗ್ತದೆ, ನಾವು ಹೋಗುವ ಮೊದಲು, ನಾವು ತೆರಳಿದ ಬಳಿಕವೂ ಸಮಾರಂಭ ನಡೆಯಲಿದೆ... ಎಂಬಿತ್ಯಾದಿ ಕನಿಷ್ಠ ಪ್ರಜ್ಞೆಗಳನ್ನೂ ಕಳೆದುಕೊಂಡು ನಾವು ಬಹಳಷ್ಟು ಸಲ ಅನಾಗರಿಕರಂತ ವರ್ತಿಸುತ್ತೇವೆ. ನಮಗದು ಅಂದಾಜೇ ಆಗುವುದಿಲ್ಲ. ನಮ್ಮ ಆದರ್ಶ, ನಮ್ಮ ಹೋರಾಟದ ಕಿಚ್ಚು, ನಮ್ಮ ಹಿತವಚನ, ನಮ್ಮ ಸಭ್ಯತೆ, ನಮ್ಮ ಭಯಂಕರ ಚಿಂತನೆಗಳೆಲ್ಲ ನಾಲ್ಕು ಜನ ಸೇರಿದಲ್ಲಿ ಮಾಡುವ ಒಣ ಭಾಷಣ ಮತ್ತು ಬೆಳಗ್ಗೆದ್ದ ಕೂಡಲೇ ಶ್ರದ್ಧೆಯಲ್ಲಿ ಹಾಕುವ ವಾಟ್ಸಪ್ ಸ್ಟೇಟಸ್ಸಿಗೆ ಮಾತ್ರ ಸೀಮಿತ... ಪಾಲನೆಯಲ್ಲಿ ಸೊನ್ನೆ ಅಷ್ಟೇ... ಇಲ್ಲವಾದಲ್ಲಿ ಸಾರ್ವಜನಿಕ ಶಿಷ್ಟಾಚಾರಗಳ ಪಾಲನೆ ಇಷ್ಟೊಂದು ಅಸಭ್ಯ ಆಗುತ್ತಿರಲಿಲ್ಲ. ಏನಂತೀರಿ?

-ಕೃಷ್ಣಮೋಹನ ತಲೆಂಗಳ (14.02.2025)

No comments:

Popular Posts