ಇರಬೇಕು ಇರುವಂತೆ... ಮಾತು ಜಾರಿ, ಸೋರಿ ಕರಗಿ ಕೊರಗದಂತೆ...!

 



ನಾನು ಎಲ್ಲರನ್ನೂ ಒಳ್ಳೆಯವರು ಅಂತ ನಂಬ್ತೇನೆ. ಸತ್ಯವನ್ನೇ ಮಾತನಾಡಿ, ಮತ್ತೆ ಕ್ರಮೇಣ ವಂಚನೆಗೊಳಗಾದಾಗ ನನ್ನ ಅರಿವಿನ ಕೊರತೆ ಬಗ್ಗೆ ಪಶ್ಚಾತ್ತಾಪ ಆಗ್ತದೆ…” ಅಂತ ಹಲುಬುವವರು ತುಂಬ ಮಂದಿ ಇದ್ದಾರಲ್ವ?

ಯಾರೋ ಒಬ್ಬರು ನಿಮಗೆ ಇಷ್ಟ. ವಿನಾ ಕಾರಣವೋ, ಸಕಾರಣವೋ, ಹಳೇ ಸ್ನೇಹವೋ, ನೀವು ಅವರ ಅಭಿಮಾನಿಯೋ ಏನೋ ಒಂದು ಸಾಮಾನ್ಯ ಪರಿಚಯದಿಂದ ನೀವು ಮಾತನಾಡಿಸುವ ಸಂದರ್ಭ ಬರುತ್ತದೆ. (ಫೋನಿನಲ್ಲೋ, ಮುಖತವೋ ಏನೇ ಇರಲಿ). ಆ ಹೊತ್ತಿಗೆ ನೀವು ಆಡುವ ಮಾತಿಗೆ, ನೀಡುವ ಸಮಯಕ್ಕೆ, ಪ್ರಕಟಿಸಿದ ಪ್ರೀತಿಗೆ ಮತ್ತು ಸ್ಫುರಿಸಿದ ಕಾಳಜಿಗೆ ಸೂಕ್ತ ಪ್ರತಿಕ್ರಿಯೆ ಬಾರದೇ ಇದ್ದರೆ ಸಹಜವಾಗಿ ಬೇಸರ ಆಗಿಯೇ ಆಗುತ್ತದಲ್ವ?

 

ಹೌದು,

ತುಂಬ ಸಲ ಎದುರು ಕುಳಿತವರನ್ನು ಮೊದಲ ಸಲ ಭೇಟಿಯಾದಾಗ ಅಥವಾ ಎಷ್ಟೋ ಸಮಯದ ನಂತರ ಭೇಟಿಯಾದಾಗ ನಾವಿಟ್ಟ ಗೌರವ, ನಾವು ನಿರೀಕ್ಷಿಸಿದ ಸ್ಪಂದನೆ ಬಾರದೆ ಮಾತುಗಳು ನೀರಸವಾದಾಗ, ಸಂಭಾಷಣೆ ಯಾಂತ್ರಿಕವಾದಾಗ, ಮಾತು ಶಿಷ್ಟಾಚಾರಕ್ಕೆ ಸೀಮಿತವಾದಾಗ, ಗೌರವ ಎಂಬುದು ಏಕಮುಖವಾಗಿ ಉಳಿದಾಗ ಸಂವಹನ ವಿಫಲವಾಗುತ್ತದೆ. ಮಾತಿನ ಹಿಂದಿನ ಕಾಳಜಿ ನಿಷ್ಪ್ರಯೋಜಕವಾಗಿ ಬಿಡುತ್ತದೆ. ಮೊದಲ ಭೇಟಿ ಮತ್ತು ಅಪರೂಪದ ಭೇಟಿಯಲ್ಲಿ ಸಂಬಾಷಣೆಗಳು ಸಹಜವಾಗಿ ಭಾವೋದ್ವೇಗದಿಂದ ಕೂಡಿರುತ್ತದೆ. ಆದರೆ ಅದು ಏಕಮುಖವಾದಾಗ ಸಂಭಾಷಣೆ ಸೋಲುತ್ತದೆ.

ಒಂದು ಗೌರವ, ಕಾಳಜಿ ಮತ್ತು ಪ್ರೀತಿ ಸ್ಫುರಿಸಿದರಷ್ಟೇ ಸಾಲದು, ಸ್ವೀಕಾರವಾಗಬೇಕು. ಇಲ್ಲದಿದ್ದರೆ ಅದು ಸೋರಿ ಹೋಗುವ ಆತಂಕ ಇದ್ದೇ ಇದೆ.

ಪ್ರಾಮಾಣಿಕವಾಗಿ ಆಡಿದ ಮಾತಿನ ಹಿಂದಿನ ಕಾಳಜಿ, ಪ್ರೀತಿ ಮತ್ತು ಸೂಕ್ಷ್ಮತೆ ಎದುರಿನವರಿಗೆ ಅದೇ ತರಂಗಾಂತರದಲ್ಲಿ ತಲುಪಿ ಅದೇ ಭಾವನೆಯಿಂದ ಅವರು ಸ್ಪಂದಿಸಿದಾಗ ಮಾತ್ರ  ಆ ಸಂಭಾಷಣೆ ಪರಿಪೂರ್ಣವಾಗುತ್ತದೆ. ಆದರ ಬದಲು ಪ್ರತಿಕ್ರಿಯೆ ನೀರಸವಾದಾಗ, ಅನ್ಯಮನಸ್ಕತೆಯಿಂದ ಕೂಡಿದಾಗ ಮತ್ತು ಪುರುಸೊತ್ತಿಲ್ಲದ ಭಾವ, ಅಸಹಜತೆಯನ್ನು ಸೃಷ್ಟಿಸಿದಾಗ ಮಾತು ಆಡಿದವನ ಉದ್ವೇಗ ಕುಂದಿ ಇಹಲೋಕಕ್ಕೆ ಮರಳುತ್ತಾನೆ. ಎದುರಿನವರಿಗೆ ಮಾತನಾಡಲು ಆಸಕ್ತಿ ಇಲ್ಲ ಎಂಬುದ ಸ್ಪಷ್ಟವಾಗಿ ಗೊತ್ತಾಗ್ತದೆ. ಮಾತನಾಡುತ್ತಲೇ ಇರುವವನಿಗೆ ಅದು ಅಂದಾಜೇ ಆಗದಿದ್ದರೆ, ಆಡಿದ ಅಷ್ಟೂ ಮಾತುಗಳು ಮೌಲ್ಯ ಕಳೆದುಕೊಂಡು ಹಲುಬುವಿಕೆಗೆ ಸೀಮಿತವಾಗಿ ಬಿಡ್ತದೆ.

 

ವಿಮಾ ಪ್ರತಿನಿಧಿಗಳು ಅಥವಾ ಇನ್ಶೂರೆನ್ಸ್ ಏಜೆಂಟರ ವೃತ್ತಿ ಬಗ್ಗೆ ನನಗೆ ತುಂಬ ಗೌರವ ಇದೆ. ಆ ಗೌರವ ಇರಿಸಿಯೇ ಇದನ್ನು ಹೇಳುತ್ತಿದ್ದೇನೆ. ಅವರಲ್ಲಿ ಒಂದು ವರ್ಗದವರಿದ್ದಾರೆ. ಅವರು ತಮಗಿರುವ ಕಿರು ಪರಿಚಯವನ್ನೇ ಆಧಾರವಾಗಿಟ್ಟು ನಮ್ಮತ್ರ ಮಾತಿಗಿಳಿಯುತ್ತಾರೆ. ಆರಂಭದಲ್ಲಿ ಇನ್ಶೂರೆನ್ಸಿನ ಪ್ರಸ್ತಾಪವೇ ಇರುವುದಿಲ್ಲ. ಪರಿಚಯ ಮಾಡಿಕೊಳ್ಳುತ್ತಾರೆ. ಬದುಕಿನ ಬಗ್ಗೆ ಸಂಬಳದ ಬಗ್ಗೆ, ಸೇವಿಂಗ್ಸ್ ಬಗ್ಗೆ ತಿಳ್ಕೊಳ್ತಾರೆ. ನಂತರ ವಿಚಾರಕ್ಕೆ ಬರ್ತಾರೆ. ತನ್ನ ಸಂಸ್ಥೆಯ ಇನ್ಶೂರೆನ್ಸ್ ಮಾಡಿಸದಿದ್ದರೆ ಬದುಕೇ ವ್ಯರ್ಥ. ಪ್ರಸ್ತುತ ನೀವು ಮಾಡಿರುವ ಇನ್ಶೂರೆನ್ಸ್ ಜಗತ್ತಿನಲ್ಲೇ ಅತ್ಯಂತ ನಷ್ಟಕ್ಕೆ ಕಾರಣವಾಗುವ ಇನ್ಶೂರೆನ್ಸ್ ಹೀಗೆಲ್ಲ ಮಾತು ಹೊರಳುತ್ತದೆ... ಕೊನೆಗೆ ಒಂದು ಪಾಲಿಸಿ ಮಾಡುವ ಎಂಬಲ್ಲಿಗೆ ಸಂಭಾಷಣೆ ತಲುಪುತ್ತದೆ. ನಿಮ್ಮನ್ನು ಮಾತಿನಲ್ಲೇ ದಾಕ್ಷಿಣ್ಯಕ್ಕೆ ಸಿಕ್ಕಿಸಿ ಶತಾಯಗತಾಯ ನಿಮಗೆ ಬೇಕಿದ್ದರೂ, ಬೇಡದೇ ಇದ್ದರೂ ವ್ಯವಹಾರ ಕುದುರಿಸಿ ಪಾಲಿಸಿ ಮಾಡಿಸಿಯೇ ಮಾಡಿಸುತ್ತಾರೆ. ಮತ್ತೆ ಮತ್ತೆ ಅವರು ಮಾತಿಗೆ ಸಿಕ್ಕುತ್ತಾರೆ ಅಂತ ಹೇಳುವ ಹಾಗಿಲ್ಲ.

ಸಂಗತಿ ಇಷ್ಟೆ, ಇನ್ಶೂರೆನ್ಸ್ ಪಾಲಿಸಿ ಮಾಡುವುದು ತಪ್ಪಲ್ಲ. ಅದು ಅವರ ಉದ್ಯೋಗ. ಅದಕ್ಕೆ ಮಾತೇ ಬಂಡವಾಳ, ಅದು ಒಪ್ಪುತ್ತೇನೆ. ಆದರೆ, ಪರಿಚಯವನ್ನು ಬಂಡವಾಳ ಮಾಡಿಕೊಂಡು, ಭಯಂಕರ ಕಾಳಜಿ, ಪ್ರೀತಿಯನ್ನು ತೋರಿಸಿ, ಕೊನೆಗೆ ಅದನ್ನೇ ಪಾಲಿಸಿ ಮಾಡಿಸುವಲ್ಲಿ ವರೆಗೆ ಭಾವನಾತ್ಮಕ ಬ್ಲಾಕ್ ಮೇಲ್ ಮಾಡುವ ಪ್ರವೃತ್ತಿಗೆ ನನ್ನ ಭಯಂಕರ ವಿರೋಧ ಇದೆ.

ಪ್ರೀತಿ, ಕಾಳಜಿ, ನೆನಪಿಸುವಿಕೆ, ಗೌರವ, ಅಭಿಮಾನ ಕೊನೇ.....ಗೆ ಬಿಸಿನೆಸ್ಸಿಗೆ ತಲುಪುತ್ತದೆ ಅಂತಾದರೆ ಅಷ್ಟೂ ಮಾತುಗಳ ಉದ್ದೇಶ ವ್ಯವಹಾರ ಕುದುರಿಸುವುದೇ ಅಂತ ನಾನು ಅಂದುಕೊಳ್ಳಬೇಕಾಗುತ್ತದೆ.

ಒಂದು ಮೊಟ್ಟೆಯ ಕತೆ ಸಿನಿಮಾದಲ್ಲಿ ಬೋಳು ಮಂಡೆಯ ನಾಯಕ ರಾಜ್ ಶೆಟ್ಟಿ ಅವರಿಗೆ ಕೂದಲು ಕಸಿ ಮಾಡಿಸಲು ಹುಡುಗಿಯೊಬ್ಬಳು ಪರಿಚಯ ಮಾಡಿ ಕರೆದುಕೊಂಡು ಹೋಗುವ ಸನ್ನಿವೇಶ ಇಂಥದ್ದೆ ಭಾವನಾತ್ಮಕ ವ್ಯವಹಾರಕ್ಕೆ ಅತ್ಯುತ್ತಮ ಉದಾರಹಣೆ ಅಷ್ಟೇ...

ಅಭಿಮಾನ, ಪ್ರೀತಿ, ಕಾಳಜಿಗಳಿಗೆ ಮಾತು ಸರ್ಟಿಫಿಕೇಟ್ ಅಲ್ಲವೇ ಅಲ್ಲ. ಒಬ್ಬರನ್ನು ಭೇಟಿಯೇ ಆಗದೆ, ಮಾತನ್ನೇ ಆಡದೆ, ಅವರಿಗೆ ಪುಕ್ಕಟೆ ಸಲಹೆ, ಆದೇಶ, ಸಂದೇಶ ನೀಡದೇ ಅವರ ಕುರಿತು ಅಭಿಮಾನ ಇರಿಸಬಹುದು, ಗೌರವಿಸಬಹುದು, ಅವರಂತೆಯೇ ಒಳ್ಳೆಯ ಗುಣಗಳನ್ನು ಅಳವಡಿಸಕೊಳ್ಳಬಹುದು. ತಮಾಷೆ ಅಂದರೆ, ಯಾರ ಬಗ್ಗೆ ನೀವು ಅತಿಯಾದ ಅಭಿಮಾನ ಇರಿಸಿರುತ್ತೀರೋ... ಅವರ ಪರಿಚಯ ಆಗಿ, ಅವರ ಜೊತೆ ಮಾತನಾಡಿ, ಅವರು ನೀವು ಅಂದುಕೊಂಡಂತೆ ಏನೂ ಅಲ್ಲ ಎಂಬುದು ಅರಿವಾಗುವಷ್ಟರಲ್ಲಿ ತಡವಾಗಿರುತ್ತದೆ. ನಂತರ, ಮೊದಲಿದ್ದ ಅಭಿಮಾನದ ಬಲೂನು ಒಡೆದು ಹೋಗುವ ಸಂದರ್ಭಗಳೂ ಇವೆ. ನಿಮ್ಮಲ್ಲಿ ತುಂಬ ಮಂದಿಗೆ ಇಂತಹ ಅನುಭವ ಆಗಿರಬಹುದು. ದೂರದಿಂದ ನೋಡಿ ಇರಿಸುವ ಅಭಿಮಾನ, ಸಮೀಪ ದರ್ಶನದ ಬಳಿಕ ತೊಲಗುವುದೂ ಇದೆ.

ಅಭಿಮಾನಕ್ಕೆ ಮೌಲ್ಯ ಸಿಕ್ಕಬೇಕಾದರೆ ಅದು ಸ್ವೀಕರಿಸಲ್ಪಡಬೇಕು. ನೀಡಿದ ಸಮಯದ ಶೇ.10ದರೂ ಸಮಯ ಮರಳಿ ನಮಗೆ ಮೀಸಲಿರಿಸಲ್ಪಟ್ಟಿರಬೇಕು. ಇಲ್ಲವಾದಲ್ಲಿ ಗೋಗರೆದು ಭಿಕ್ಷೆ ಬೇಡಿದಾಗಲೂ ಕಾರಿನ ಒಳಗೆ ಕೂತವ ಕಮಕ್ ಕಿಮಕ್ ಎನ್ನದೆ ಬಿಗಿದ ಮುಖದಲ್ಲಿ ಕೂತಿದ್ದರೆ, ಒಂದು ನಿಮಿಷ, ಎರಡು ನಿಮಿಷ ದಯನೀಯವಾಗಿ ಗೋಗರೆದ ಭಿಕ್ಷುಕನಿಗೂ, ನಮಗೂ ಎಂತದ್ದೂ ವ್ಯತ್ಯಾಸ ಇಲ್ಲದ ಹಾಗಾದೀತು. ಸೋ ಕಾಲ್ಡ್ ಸೆಲೆಬ್ರಿಟಿಗಳು, ದೊಡ್ಡ ದೊಡ್ಡ ಕಲಾವಿದರೂ, ಜನಪ್ರಿಯ ಸಾಹಿತಿಗಳು, ನಟರು, ಮಾಧ್ಯಮ ದೈತ್ಯರು... ಹೀಗೆ ಜನಪ್ರಿಯರಾದ ನಾನಾ ವರ್ಗದವರೊಳಗೆ ಇಂಥವರೂ ಇರ್ತಾರೆ.

ಅಭಿಮಾನವನ್ನು ದುರುಪಯೋಗ ಮಾಡುವವರು, ಇಟ್ಟ ಅಭಿಮಾನ ತೊಲುಗುವಷ್ಟರ ಮಟ್ಟಿಗೆ ಕಿರಿಕಿರಿ ಮಾಡುವವರು, ಉಡಾಫೆ ತೋರುವವರು. ಕೆಟ್ಟ ಅನುಭವಗಳನ್ನು ಕಟ್ಟಿಕೊಟ್ಟು ತಮ್ಮ ದೊಡ್ಡತನದ ಮುಖವಾಡವನ್ನೇ ತಾವೇ ಕಳಚಿ ತೋರಿಸುವವರು, ಹೀಗೆ...

 

ಸಾಲ ಕೇಳುವುದಕ್ಕೋಸ್ಕರ ಗಂಟೆಗಟ್ಟಲೆ ಪ್ರೀತಿ ತೋರಿಸಿ ಪೀಠಿಕೆಯ ಮಾತನಾಡಿ, ದುಡ್ಡು ಕೇಳುವವರು. ಪಾಲಿಸಿ ಮಾಡಿಸುವುದಕ್ಕೋಸ್ಕರ ನಮ್ಮ ಬದುಕಿನ ಬಗ್ಗೆ ಇಣುಕಿ ಮಾತನಾಡಿಸುವವರು, ಯಾವುದೋ ಸ್ಕೀಂ, ಇನ್ಯಾವುದೋ ಬ್ಯಾಂಕಿಂಗ್ ವ್ಯವಹಾರದ ಬೆಳವಣಿಗೆಗಾಗಿ ರೆಡಿಮೇಡ್ ಕಾಳಜಿಯನ್ನು ತೋರಿಸುವ ಮಾತುಗಳಿಗೆಲ್ಲ ಅಷ್ಟೇ ಬೆಲೆ... ಅದರ ಹಿಂದೆ ಇರುವುದು ವ್ಯವಹಾರದ ಉದ್ದೇಶ ಅಷ್ಟೇ... ಸ್ನೇಹದ ಹೆಸರೇಳಿ ಸಾಲ ಕೇಳಿದ ನಂತರ ನಂಬರ್ ಬ್ಲಾಕ್ ಮಾಡುವವರು, ಗಂಟೆಗಟ್ಟಲೆ ವಿವರಿಸಿದ ನಂತರವೂ ನೀವು ಇನ್ಶೂರೆನ್ಸ್ ಪಾಲಿಸಿ ಮಾಡಿಸದೇ ಇದ್ದರೆ ಮಾತು ಬಿಡುವವರು ಎಷ್ಟು ಮಂದಿ ಬೇಕು ಹೇಳಿ.... ಇನ್ಶೂರೆನ್ಸ್ ಪಾಲಿಸಿ ಮಾಡುವವರೆಲ್ಲ ಸಂಬಂಧಗಳನ್ನು ದುರುಪಯೋಗ ಮಾಡುತ್ತಾರೆ, ಪಾಲಿಸಿ ಮಾಡಿಸದೇ ಇದ್ದರೆ ಮಾತು ಬಿಡುತ್ತಾರೆ ಎಂಬ ಸಾಮಾನ್ಯೀಕರಿಸಿದ ಅಭಿಪ್ರಾಯ ಖಂಡಿತಾ ನನ್ನದಲ್ಲ. ಆದರೆ, ಮಾತುಗಳು ಹೀಗೂ ದುರುಪಯೋಗ ಆಗುತ್ತವೆ ಎಂಬುದಷ್ಟೇ ನನ್ನ ಕಂಪ್ಲೇಂಟು.

ಅದಕ್ಕೇ ಶುರುವಿಗೇ ಹೇಳಿದ್ದು, ನನ್ನಲ್ಲಿ ಮಾತನಾಡುವವನ ಕಾಳಜಿ ಪ್ರಾಮಾಣಿಕವ, ನಿಜವಾಗಿ ಆಡುವ ಮಾತಿನ ಹಿಂದೆ ಬೇರೆ ಉದ್ದೇಶ ಇದೆಯಾ, ನಾನು ತೋರಿಸುವ ಅಭಿಮಾನಕ್ಕೆ ಇವನು ಅರ್ಹನ, ನಾನಾ ಪ್ರೀತಿಯಿಂದ ಮಾತನಾಡಿಸುತ್ತಾ ಇದ್ದರೂ ಅವನಿಗೆ ಅದನ್ನು ಕೇಳುವ ಆಸಕ್ತಿ ಇಲ್ಲವ? ಅವನಿಗೆ ನನ್ನ ಮಾತುಗಳು ಕಿರಿಕಿರಿ ಆಗ್ತಾ ಇದೆಯಾ ಅಂತ ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಖಂಡಿತಾ ನಮ್ಮೊಳಗಿರಬೇಕು.

ನಮಗೆ ಸಹಜವಾಗಿ ನಮ್ಮ ಬಗ್ಗೆ ದುರಭಿಮಾನ ಇರ್ತದೆ, ಇದ್ದೀತು. ನಾನು ಹೇಳಿದ್ದು, ಮಾತನಾಡಿದ್ದು ಸರಿಯೇ ಇರ್ತದೆ ಎಂಬ ಅಹಂ ಇದ್ದೇ ಇರ್ತದೆ. ಆದರೆ ಅನುಭವಗಳು ತುಂಬ ಪಾಠ ಕಲಿಸುತ್ತವೆ, ನಮ್ಮ ಅಹಂನ ಬೊಜ್ಜನ್ನು ಕರಗಿಸುತ್ತದೆ ಮತ್ತು ನಮ್ಮೊಳಗಿರುವ ಅಭಿಮಾನದ ಭ್ರಮೆಗಳನ್ನು ತೊಲಗಿಸುತ್ತವೆ.

ಸಂವಹನ ಹಿತವಾಗಿರಬೇಕಾದರೆ ಅದು ದ್ವಿಮುಖ ಗೌರವದಿಂದ ಕೂಡಿರಬೇಕು, ಸಹನೆಯ ಆಲಿಸುವಿಕೆ ಬೇಕು ಮತ್ತು ಪೂರ್ವಾಗ್ರಹಗಳು ಇರಕೂಡದು. ಅವರಿವರನ್ನು ಮೆಚ್ಚಿಸಲು ಮಾತನಾಡುವುದು, ಯಾರು ಏನಂದುಕೊಳ್ಳುತ್ತಾರೋ ಅಂತ ಹೂಂಗುಟ್ಟುವುದು, ಏನನ್ನೂ ಕೇಳಿಸದೆ ಹೌದು, ಅಲ್ಲ ಅಂತ ಯಾಂತ್ರಿಕವಾಗಿ ಮಾತನಾಡುವುದು, ನನಗೆ ನಿನ್ನ ಮಾತುಗಳು ಇಷ್ಟವಿಲ್ಲ ಅಂತ ನೇರವಾಗಿ ಹೇಳಲಾಗದೆ ಅನಿವಾರ್ಯ ಕರ್ಮ ಎಂಬಂತೆ ಸ್ಪಂದಿಸುವ ಯಾವ ಸಂಭಾಷಣೆಗೂ ಅರ್ಥವೇ ಇರುವುದಿಲ್ಲ.

ಕಟ್ಟಿ ಹಾಕಿ ಕೂರಿಸಿದಂತಹ ಮಾತುಗಳು ದಡ ಸೇರಲಾರವು. ಮಾತ್ರವಲ್ಲ, ವ್ಯವಹಾರ ಕುದುರಿಸಲು, ಮೋಸ ಮಾಡಲು, ದುರುಪಯೋಗ ಪಡಿಸಿಕೊಳ್ಳಲು ಮತ್ತು ನಾಲ್ಕು ಮಂದಿಯ ಎದುರು ಅಪಮಾನ ಮಾಡಲು, ಸಿಕ್ಕಿಸಿ ಹಾಕಲು ಆಡುವ ಮಾತುಗಳು ಸಹ ವಂಚನೆಗೊಂದು ಸಲಕರಣೆ ಆದೀತು ಅಷ್ಟೇ... ಇಷ್ಟಕ್ಕೂ ಯಾವ ಮಾತಿಗೆ ಏನು ಬೆಲೆ ಸಿಕ್ತದೆ ಅಂತ ಗಮನಿಸಲು, ಅರ್ಥ ಮಾಡಿಕೊಳ್ಳಲು ಸಾಧ್ಯವಾದರೆ ನಿರ್ಲಿಪ್ತವಾಗಿ ಇಂಥಹ ಅನುಭವಗಳನ್ನು ಎದುರಿಸಲು, ದಾಟಿ ಬರಲು ಮತ್ತು ಒಂದು ಅಪಮಾನ, ನಿರಾಕರಣೆ ಹಾಗೂ ಯಾಂತ್ರಿಕ ಸ್ಪಂದನೆಯನ್ನು ಯಥಾವತ್ ಸ್ವೀಕರಿಸಲು ಸಾಧ್ಯವಾಗುತ್ತದೆ. ಅದನ್ನು ರೂಢಿಸಿಕೊಳ್ಳುವ ಸಹನೆ ಮತ್ತು ಇಚ್ಛಾಶಕ್ತಿ ಬೇಕು, ಅಷ್ಟೇ...

ಅದಕ್ಕೆ ನಿನ್ನೆ ಅಗಲಿದ ಕವಿ ಎಚ್ಚೆಸ್ವಿ ಅವರು ಹೇಳಿದ್ದು... ಇರಬೇಕು ಇರುವಂತೆ.... ಅಲ್ವ?

-ಕೃಷ್ಣಮೋಹನ ತಲೆಂಗಳ (31.05.2025)

No comments:

Popular Posts