ಮಳೆಯ ಮಹಿಮೆಯೇ ಅಂಥಾದ್ದು! ಒಂದೆಡೆ ಖುಷಿ, ಮತ್ತೊಂದೆಡೆ ಮುಗಿಯದ ತಲೆನೋವು... ಅನಾಹುತಗಳು..ಎಲ್ಲೆಂದರಲ್ಲಿ ಕೆಸರು, ಕಾಲಿಟ್ಟಲ್ಲಿ ನೀರು... ಕೈಯಲ್ಲಿ ಅನಿವಾರ್ಯ ಕರ್ಮವೆನಿಸಿದಂತ ಕೊಡೆ ಹಿಡಿಯಲೇ ಬೇಕು...! ಇವೆಲ್ಲದಕ್ಕಿಂತ ಹೊರಗೆ ನಿಂತು ಸುರಿಯುವ ಮುಸಲಧಾರೆಯ ನಡುವೆ ನಿಸ್ಸಂಕೋಚವಾಗಿ ನೆನೆದರೆ ಸಿಗೋ ಪುಳಕ ಮಾತ್ರ ಡಿಫರೆಂಟೋ ಡಿಫರೆಂಟು! ಮುಕ್ತವಾಗಿ ರಸ್ತೆ ನಡುವೆ ದಪ್ಪದ ಮಳೆ ಶವರ್ಗೆ ಫಲಾನುಬಿಗಳಾಗ್ಬೇಕು ಅಂದ್ರೆ ಬೈಕ್ ರೈಡ್ ಮಾಡ್ಬೇಕು! ಅದು ಬ್ರೇಕ್ ಇಲ್ಲದ ಮಳೇನಲ್ಲಿ...! ಅಧಿಕ ಪ್ರಸಂಗ ಅನಿಸ್ಬಹುದಾದ್ರೂ.
.. ವಿಷ್ಯ ಮಾತ್ರ ವಾಸ್ತವ...ಹಾಗೆ ನೋಡಿದ್ರೆ ಕೊಡೆ ಹಿಡ್ಕೊಂಡು ಹೋದ್ರೆ ಒದ್ದೆ ಆಗೋದಿಲ್ಲ ಅಂತ ಹೇಳಿದೋರ್ಯಾರು? ಗಾಳಿ ಸಹಿತ ಮಂಗಳೂರಲ್ಲಿ ಸುರಿಯೋ ಥರ ಮಳೆ ಬಂದ್ರೆ ಸೊಂಟದ ಮೇಲೆ-ಕೆಳಗೆ ಎಲ್ಲಾ ಶವರ್ ಬಾಥ್ ಖಂಡಿತ. ಎಂತಹ ಮರದ ಕಾಲಿನ ಕೊಡೆ ಇದ್ರೂ ಗಾಳಿ ರಭಸಕ್ಕೆ ಮಳೆ ಹನಿ ಸಿಂಚನದಿಂದ ಪಾರಾಗೋಕೆ ಸಾಧ್ಯನೇ ಇಲ್ಲ. ಅಂಥದೇನಾದ್ರೂ ಪಾರಾಗೋವಂಥಹ ಕೊಡೆ ಇದ್ರೆ ದಯವಿಟ್ಟು ತಿಳ್ಸಿ... ಜೊತೆಗೆ ಬ್ಯಾಗ್ ಇದ್ರಂತೂ ಮಳೇಲಿ ನಡ್ಕೊಂಡು ಹೋಗೋರ ಪಾಡು ದೇವ್ರಿಗೇ ಪ್ರೀತಿ!
ಸೋ... ಗಾಢ ಮಳೆಗೆ ಒಂದು ಸಾರಿ ನಿರುಮ್ಮಳವಾಗಿ ರೈಡ್ ಮಾಡಿದ್ರೆ ಸಿಗೋ ಖುಷಿನೇ ಬೇರೆ.. (ರಿಸ್ಕೂ ಇದೆ). ಮಳೆ ಅಂಗಿ ತೊಟ್ಕೊಂಡು ಸವಾರಿ ಮಾಡಿದ್ರೆ ಒದ್ದೆ ಆಗೋದಿಲ್ವ? ಅನ್ನೋ ಬಾಲಿಶ ಪ್ರಶ್ನೆ ಮಾತ್ರ ಕೇಳ್ಬೇಡಿ... (
ಒಂದಿಷ್ಟೂ ಒದ್ದೆ ಆಗಿಸದ ರೈನ್ ಕೋಟು ಅಂಥಾನೂ ಇದೆಯಾ?!) ಖಂಡಿತಾ ಒಂದು ೭೫% ಒದ್ದೆ ಆಗೇ ಆಗ್ತೀವಿ... ಆದ್ರೆ, ಜೋರು ಗಾಳಿ ಮಳೆ ಬರ್ತಾ ಇರ್ಬೇಕಾದ್ರೆ... ಮುಖಕ್ಕೆ ಬಂದು ಎರಚುವ ತಂಪು ಹನಿರಾಶಿ, ಸುತ್ತಲೂ ಏನಾಗ್ತಿದೆ ಅಂತ ಗೊತ್ತಾಗದಷ್ಟರ ಮಟ್ಟಿಗೆ ಕಿವಿಗಡಚಿಕ್ಕುವ ಗಾಳಿಯ ಅಬ್ಬರ... ರಸ್ತೆ ತುಂಬಾ ನೀರು... ಕಾರುಗಳು, ಲಾರಿಗಳೂ ನಮ್ಮನ್ನು ಸವರ್ಕೊಂಡೇ ಹೋಗ್ತಿವೆಯೇನೋ ಅನ್ನುವಷ್ಟು ಹತ್ರ ವೇಗವಾಗಿ ಸಂಚರಿಸೋವಾಗ ಗುಂಡಿಗಳಲ್ಲಿದ್ದ ಕೆಸರೆಲ್ಲಾ ನಮ್ಮ ರೈನ್ ಕೋಟ್ ಮೇಲೆ ಸಿಂಚನ...! ತುಂಬಾ ಕಡೆ ರಸ್ತೆ ಮೇಲೆ ನದಿ ಥರ (ಪ್ರವಾಹ ಅಲ್ಲ) ಥರಾ ಹರಿಯೂ ನೀರಿನ ರಾಶಿ ಮೇಲೆ ಜುಂ ಅಂಥ ಕ್ರಾಸ್ ಮಾಡೋವಾಗ ನೀರು ಹಾರೋ ಸ್ಟೈಲ್ ನೋಡ್ಬೇಕು... ಅದೂ ಒಂಥರಾ ಮಜಾ...ರಸ್ತೆ ಮೇಲೆ ಅಲ್ದಲ್ಲಿ ಗುಂಡಿ... ರಸ್ತೆ ಬಿಟ್ಟು ಕೆಳಗೆ ಇಳಿದ್ರೆ ಟಯರ್ ಹೂತು ಹೋಗೋ ಅಂಥ ಕೆಸರು...ಮೋರೆಗೆ ಗಾಳಿಮಳೆ ಎರಚುತ್ತದೆ ಅಂತ ಹೆಲ್ಮೆಟ್ನ ಗ್ಲಾಸ್ ಇಳಿಬಿಟ್ರೆ ಎದುರಿಗೆ ಮಂಜು ಬಿಟ್ರೆ ಬೇರೇನೂ ಕಾಣೋದಿಲ್ಲ... ಮಳೆ ಬರ್ತಾ ಇರ್ಬೇಕಾದ್ರೆ ಓವರ್ಟೇಕ್ ಮಾಡೋದು ತುಂಬಾ ಡೇಂಜರು.... ಮುಂತಾದ ಇತಿಮಿತಿಗಳೂ ‘ಮಳೆಗಾಳಿ ಸವಾರಿ’ನಲ್ಲಿ ಖಂಡಿತಾ ಇವೆ.... ಆದರೂ.. ಹೇಗೂ ಒದ್ದೆ ಆಗ್ಕೊಂಡು ಬರೋ ಹೊತ್ತಿಗೆ ಆ ‘ಬಿಕ್ನಾಸಿ’ ಮಳೇನ ಅನುಭವಿಸ್ಕೊಂಡು ಬರೋದ್ರಲ್ಲೂ ಖುಷಿ ಇರುತ್ತೆ ಕಣ್ರೀ! ಅದ್ರಲ್ಲೂ ಭಯಂಕರ ಗಾಳಿ ಮಳೆ ಬಂದು ಬಿಟ್ಟ ತಕ್ಷಣ ರೋಡ್ ಮೇಲೆಲ್ಲಾ ಹರೀತಾ ಇರೋ ನೀರ್ ಮೇಲೆ ಗುಂಡಿಗಳನ್ನ ತಪ್ಪಿಸ್ಕೊಂಡು ಹೋಗೋದು ಥಂಡ ಥಂಡ... ರಿಸ್ಕಿ ಅನುಭವ... ಆದರೂ.... ರಸ್ತೆ ಪಕ್ಕ ಕೊಡೆ ಹಿಡ್ಕೊಂಡು ಕೆಸರು ಸ್ನಾನಕ್ಕೆ ಸಾಕ್ಷಿಯಾಗೋರ ಪಾಡು ದೇವರಿಗೇ ಪ್ರೀತಿ....
ಬೆಂಗ್ಳೂರಿಂದ ಚೇವಾರ್ ತನ್ನ ಬ್ಲಾಗ್ನಲ್ಲಿ ‘ಸುರಿಯೋ ಮಳೆನಲ್ಲಿ ನೆನೆಯೋ ಆಸೆ’ ಅಂತ ಬರ್ದಿದ್ದು ಓದಿದ ಮೇಲೆ ಈ ಅನುಭವ ಹಂಚ್ಕೊಳ್ಳೋಣ ಅನ್ನಿಸಿತು...

ಚಿತ್ರಕೃಪೆ: ಎಚ್.ಕೆ.ಬಲ್ಲಾಳ್ ಮತ್ತು ನನ್ನ ಪ್ರಯೋಗ
5 comments:
Thumba olleya baraha krishna.nijavagiyu nanu ooralliddage maleyalli neneda anubahva nenapaythu.......Thanks..Abdul Rasheed Budoli from oman
ಕ್ರಷ್ಣಮೋಹನ
ಸುಂದರ ನಿರೂಪಣೆ, ಒಳ್ಳೆಯ ಬರಹ, ಹೀಗೆಯೇ ಬರೆಯುತ್ತಿರಿ, ಬರುತ್ತಿರುವೆ
ಮಂಗಳೂರಿನ ಮುಂಗಾರು ಮಳೆ ಎಂದರೆ ಹಾಗೆ ಅಲ್ಲವೇ. ಇಡೀ ಶರೀರ ಒದ್ದೆ ಮಾಡದಿದ್ದರೆ ಅದಕ್ಕೂ ಸಮಾಧಾನ ಇಲ್ಲ. ನಿತ್ಯಕಿರಿಕಿರಿಯನ್ನು ಸರಿಯಾಗಿಯೇ ವರ್ಣಿಸಿದ್ದೀರಿ
sakath barediddiyaa.......nijavaglu.male gaala feel ayithu....
arare nangu ade thara aytu, maleyalli oddeyaada haage! aagaaga bareyuttiri...
Post a Comment