ಭಾಷೆ ಬದಲಾಗ್ತಾ ಇದೆಯಾ? ಬದಲಾಯಿಸಲಾಗದ ಸಂಗತಿಗಳ ಬಗ್ಗೆ ಕುರುಡರಂತೆ, ಕಿವುಡರಂತೆ ಇರುವುದೇ ಲೇಸು! LANGUAGE
![]() |
ಸಿಬಂತಿ ಪದ್ಮನಾಭ ಅವರ ಫೇಸ್ಬುಕ್ ವಾಲ್ ನಿಂದ ಬಳಸಿದ್ದು |
1960,70,80ನೇ ದಶಕದಲ್ಲಿ ಅವತಾರ
ಎತ್ತಿದವರ ಸಮಸ್ಯೆ ಏನೆಂದರೆ ಪರಂಪರೆಯಿಂದ ಬಂದ ಭಾಷೆಯ ಕುಲಗೆಡಿಸಿದರೆ ಕಿರಿಕಿರಿ
ಅನುಭವಿಸುವುದು, ಸಿಟ್ಟು ಬರುವುದು ಮತ್ತು ಹತಾಶೆ ಕಾಡುವುದು. ಭಾಷೆ ಹೀಗೆಯೇ ಇರಬೇಕು, ಭಾಷೆಯ
ಬಳಕೆ ಈ ಥರ ಇದ್ದರೆ ಅದರ ಆಯುಷ್ಯ ಜಾಸ್ತಿ, ಭಾಷೆ ಸಮೃದ್ಧವಾಗಬೇಕು, ಮೂಲ ಸ್ವರೂಪ
ಕಳೆದುಕೊಳ್ಳಬಾರದು ಅಂತ ಕಲಿಯುತ್ತಾ ಬಂದವರು ನಾವು. ಆದರೆ ಹೋಗ್ತಾ ಹೋಗ್ತಾ.... ಹೋಗ್ತಾ ಭಾಷೆ
ಬಳಕೆ ಮತ್ತು ಭಾಷೆ ಬಳಸುವವರ ಸ್ವರೂಪ (ಸುರುಪ) ಬದಲಾಗ್ತಾ ಹೋದ್ಹಾಗೆ 20ನೇ ಶತಮಾನದ ಮಂದಿಯ ಅಸಹಿಷ್ಣುತೆ
ಧಗಧಗಿಸುತ್ತಾ ಹೋಗ್ತದೆ. ಏನನ್ನೋ ಕಳೆದುಕೊಂಡ ಭಾವ ಕಾಡುತ್ತದೆ... ಆದರೆ ಅದೆಲ್ಲ ಅರಣ್ಯ ರೋದನ
ಅಷ್ಟೆ... ಬದಲಾವಣೆ ಜಗದ ನಿಯಮ ಅಂತ ಅರ್ಥ ಮಾಡಿಕೊಳ್ಳುವುದೇ ಜಾಣತನ.
ಮುಖ್ಯವಾಹಿನಿ ಮತ್ತು
ಜಾಲತಾಣ ಮಾಧ್ಯಮ ಹಾಗೂ ಭಾಷೆಯ ಬಳಕೆ ಎಲ್ಲೆಲ್ಲೆ ಆಗುತ್ತಿದೆಯೋ ಅಲ್ಲೆಲ್ಲ ವ್ಯಾಕರಣ, ಅಕ್ಷರ
ದೋಷಗಳು ಮತ್ತು ಭಾಷೆಯ ಉಚ್ಚಾರ ಮತ್ತು ಬಳಕೆಯ ಶೈಲಿಗಳಲ್ಲಿ ತಪ್ಪುಗಳು ಆಗುತ್ತಲೇ ಇವೆ. ಕಾರಣಗಳು
ಹಲವಿದ್ದರೂ, ತಪ್ಪುಗಳು ಸಮರ್ಥನೀಯ ಅಲ್ಲದಿದ್ದರೂ ತಪ್ಪುಗಳು ಆಗುತ್ತಲೇ ಇವೆ.
ಕನ್ನಡದ ಪತ್ರಿಕೆಗಳಲ್ಲಿ
ಆಗುವ ಪ್ರಮಾದಗಳನ್ನು ಪಟ್ಟಿ ಮಾಡಿ ಅದನ್ನು ತೋರಿಸಿಕೊಡಲು ಒಂದು ಅಂಕಣವೇ ಇದೆ. ಪತ್ರಿಕೆಗಳಲ್ಲಿ
ಪ್ರಕಟವಾಗುವ ತಪ್ಪುಗಳನ್ನು ನವಿರು ಹಾಸ್ಯ ಸಮೇತ ಪಟ್ಟಿ ಮಾಡಿ ವಿಮರ್ಶಿಸಿ, ತಪ್ಪು ಮಾಡುತ್ತಿರುವ
ಪತ್ರಕರ್ತರನ್ನೂ ಹೊಣೆ ಮಾಡಿ ಬರೆಹದ ಮೂಲಕ ತಪ್ಪುಗಳನ್ನು ಗಮನಕ್ಕೆ ತರುವ ಪ್ರಯತ್ನ ಆಗುತ್ತಿದೆ.
ಇದೇ ಸಂದರ್ಭ ಬಳಸಿ ಪತ್ರಿಕೆಗೆ ಬಯ್ಯುವವರ ಸಂಖ್ಯೆಯೂ ದೊಡ್ಡದಿದೆ. ಸಂತೋಷ. ಯಾವುದೇ ಕಾರಣಕ್ಕೆ
ತಪ್ಪುಗಳು ಸಮರ್ಥನೀಯ ಅಲ್ಲ, ಅದರಲ್ಲಿ ಎರಡು ಮಾತಿಲ್ಲ.
ಇದಕ್ಕೆ ಪೂರಕವೋ,
ಪರ್ಯಾಯವೋ ಆಗಿ ಆಕಾಶವಾಣಿ, ವೆಬ್ ಸುದ್ದಿ ತಾಣಗಳು, ಸುದ್ದಿ ವಾಹಿನಿಗಳಲ್ಲೂ ಕಂಡು ಬರುವ
ತಪ್ಪುಗಳನ್ನು ಪಟ್ಟಿ ಮಾಡುವ, ಪ್ರಶ್ನಿಸುವ ಮತ್ತು ತಿದ್ದಲು ಪ್ರಯತ್ನಿಸುವ ಅಂಕಣಗಳು ಬಹುಶಃ
ಇಲ್ಲ ಅಂದುಕೊಂಡಿದ್ದೇನೆ. ಮುದ್ರಣ ಮಾಧ್ಯಮ ಹೊರತು ಪಡಿಸಿ ಇತ್ತೀಚೆಗೆ ಗಮನಿಸಿದ ಕೆಲವು
ಅಪಸವ್ಯಗಳು...
1) ಒಂದು ವೆಬ್ ಸುದ್ದಿ ವಾಹಿನಿಯ ವಾರ್ತಾ
ವಾಚಕಿ ವಾರ್ತೆ ಓದುವ ಶೈಲಿ ಹೀಗಿದೆ “ಮಂಗಲೂರಿನಲ್ಲಿ ಇಂದು ಭಾರಿ ಮಲೆಯಾಗಿದ್ಯೇ....
ರಸ್ತೆಗಲು ಜಲಾವೃತವಾಗಿವೆ... ಮೆರವನಿಗೆ ಇನ್ನೆಲೆಯಲ್ಲಿ ಬಿಗಿ ಬಂದೋಬಸ್ತು ಕಲ್ಪಿಸಲಾಗಿದ್ಯೇ...
ಯಾವುದೇ ಹೈತಕರ ಗಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತೋ... ಮೆರವನಿಗೆ ವಿಜ್ರಂಬನೆಯಿಂದ
ನಡೆಯಿತೋ...” ಇಂತಹ ಎಷ್ಟೋ ಉದಾಹರಣೆ ಕೊಡಬಹುದು. ಇದು
ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ. ಆದರೆ ಆನ್
ಲೈನ್ ಗೆ ಸೀಮಿತವಾಗಿರುವ ಸುದ್ದಿ ವಾಹಿನಿಗಳು, ಯೂಟ್ಯೂಬ್ ಚಾನೆಲ್ಲುಗಳಲ್ಲಿ ಇಂತಹ ಎಷ್ಟೋ ಅಕ್ಷರ
ದೋಷ, ಉಚ್ಚಾರ ದೋಷಗಳನ್ನು ಗಮನಿಸಬಹುದು. ವಿಶೇಷ ಅಂದ್ರೆ ಮೇಲೆ ಉಲ್ಲೇಖಿಸಿದ ವಾರ್ತಾ ವಾಚಕಿ
ಗಮನಕ್ಕೆ ಈ ತಪ್ಪುಗಳು ಬಂದರೂ ಆಕೆ ಅದನ್ನು ತನ್ನ ವಾರ್ತೆ ಟ್ರೋಲ್ ಆಗುತ್ತಿದೆ, ಜನರು ಈ ರೀತಿಯ
ಭಾಷೆಯನ್ನು ಟ್ರೋಲ್ ಮಾಡುವುದರಿಂದ ತಾನು ಫೇಮಸ್ ಆಗುತ್ತಿದ್ದೇನೆ ಅಂದುಕೊಂಡು ಅದೇ ತಪ್ಪುಗಳು
ಮುಂದುವರಿಸುತ್ತಾ ಹೋಗುತ್ತಿದ್ದಾಲೆ... ಅಲ್ಲಲ್ಲ ಹೋಗುತ್ತಿದ್ದಾಳೆ. ಅನ್ನಿಸ್ತದೆ ಹೋಗ್ಲಿ.
2) ಆಕಾಶವಾಣಿ ಬಾಲ್ಯದಿಂದಲು ನಾವು
ಕೇಳುತ್ತಾ ಬಂದ ಮಾಧ್ಯಮ. ಸಂಯಮದ ನಿರೂಪಣೆ, ಭಾಷಾ ಶುದ್ಧತೆ (100 ಶೇ. ಗ್ಯಾರಂಟಿ ಇತ್ತು ಒಂದು
ಕಾಲದಲ್ಲಿ ತಪ್ಪು ಉಚ್ಚಾರ ಬರುವುದೇ ಇಲ್ಲ ಅಂತ), ಶುದ್ಧ ಭಾಷಾ ಪ್ರಯೋಗ
ಹಾಗೂ ಮನಸ್ಸು ಕೆರಳಿಸದೆ ಅರಳಿಸುವಂತಹ ಕಾರ್ಯಕ್ರಮಗಳು ಬರುತ್ತವೆ ಎಂಬ ಕಾರಣಕ್ಕೆ ನಾನಂತೂ
ಆಕಾಶವಾಣಿ ಕೇಳುತ್ತೇನೆ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಇತ್ತೀಚೆಗೆ ಆಕಾಶವಾಣಿ
ಕೇಂದ್ರವೊಂದರ ನೇರ ಫೋನ್ ಇನ್ ಕಾರ್ಯಕ್ರಮ ಕೇಳುತ್ತಿದ್ದೆ. ಗ್ರಾಮೀಣ ಭಾಗದ ಅನಕ್ಷರಸ್ಥ
ಮಹಿಳೆಯೊಬ್ಬರು ಕರೆ ಮಾಡಿ ಪ್ರೀತಿಯಿಂದ ಮಾತನಾಡುತ್ತಿದ್ದರು. ಸ್ಟುಡಿಯೋದಲ್ಲಿದ್ದ ಯುವ ನಿರೂಪಕಿ
ಕೇಳುಗ ಮಹಿಳೆಯನ್ನು ಮ್ಯಾ....ಮ್ (MADAM ಹೃಸ್ವ ರೂಪ) ಅಂತ ಸಂಬೋಧಿಸಿದರು. ಆ ಕರೆ ಮುಗಿಯುವ ಸುಮಾರು 2 ನಿಮಿಷ
ಅವಧಿಯಲ್ಲಿ ಸುಮಾರು 15-20 ಸಲ ಆಕೆ ಮ್ಯಾಮ್ ಅಂತ ಕರೆದಿರಬಹುದು. ಸುಮಾರು 40 ವರ್ಷಗಳಿಂದ
ಆಕಾಶವಾಣಿ ಕೇಳುತ್ತಿದ್ದೇನೆ. ಯಾವತ್ತೂ ಅಲ್ಲಿನ ನಿರೂಪಕರು ಮ್ಯಾಮ್, ಬ್ರೋ, ಸಿಸ್ಸಿ, ಯಮ್ಮಿ...
ಇತ್ಯಾದಿ ಸಮಕಾಲೀನ ಪದ ಬಳಸಿದ್ದು ನಾನು ಕೇಳಿರಲಿಲ್ಲ. ಇಂತಹ ಪದ ಬಳಕೆ ಆಗಬೇಕು, ಆಗಬಾರದು ಅಂತ
ಹೇಳಲು ನಾನು ಪ್ರಾಧಿಕಾರವೂ ಅಲ್ಲ. ಆದರೆ ರೇಡಿಯೋದ ನಿರಂತರ ಕೇಳುಗನಾಗಿ ಆಕಾಶವಾಣಿ ಕೂಡಾ ಖಾಸಗಿ
ಎಫ್ ಎಂ ವಾಹಿನಿ ರೀತಿ ಕಂಗ್ಲಿಷ್ ಅಥವಾ ಶಾರ್ಟ್ ಕಟ್ ಭಾಷೆಗಳನ್ನು ಬಳುಸುತ್ತದೆ ಅಂತಾದರೆ ನಾನು
ಆಕಾಶವಾಣಿಯನ್ನೇ ಯಾಕೆ ಕೇಳಬೇಕು. ಖಾಸಗಿ ಎಫ್ಎಂ ವಾಹಿನಿಯನ್ನೂ ಕೇಳಬಹುದಲ್ವ? ಮಾತ್ರವಲ್ಲ... ಜಯಂತ ಕಾಯ್ಕಿಣಿಯನ್ನು ಕಾಯ್ಕಿನಿ...
ಅಂದದ್ದು ಕೇಳಿದ್ದೇನೆ. ಬಹುವಚನದಲ್ಲಿ ಆರಂಭವಾಗುವ ವಾಕ್ಯ ಏಕವಚನದಲ್ಲಿ ಮುಗಿಯುವುದು
ಕೇಳಿದ್ದೇನೆ. ಒಂದು ಕಾಲದಲ್ಲಿ ಶುದ್ಧ ಭಾಷೆ ಮತ್ತು ನವಿರು ನಿರೂಪಣೆಯೊಂದಿಗೆ ಕೇಳುಗರಿಗೆ
ಆಪ್ತವಾಗಿದ್ದ ಆಕಾಶವಾಣಿಯ ಉದ್ಘೋಷಕರ ನಿರೂಪಣೆಯಲ್ಲೂ (ಯುವ) ಸಿಕ್ಕಾಪಟ್ಟೆ ತಪ್ಪುಗಳು,
ಅಪಸವ್ಯಗಳು ನುಸುಳುತ್ತಿದೆ.
3) ರೇಡಿಯೋ ವಾರ್ತೆ, ಪ್ರದೇಶ ಸಮಾಚಾರ ಅಂದ್ರೆ ಅದೊಂದು ಗಂಭೀರ ಮತ್ತು
ಗುಣಮಟ್ಟದ ಭಾಷೆ ಪ್ರಯೋಗದ ಸುದ್ದಿ ವಾಚನ ಅಂತ ನಾವು ತಿಳ್ಕೊಂಡಿದ್ದದ್ದು. ಈಗ ಕೆಲವು ವರ್ಷಗಳಿಂದ
ಆಕಾಶವಾಣಿ ಪ್ರದೇಶ ಸಮಾಚಾರದಲ್ಲೂ ತಡವರಿಸುವುದು, ಹೆಸರುಗಳನ್ನು ತಪ್ಪಾಗಿ ಹೇಳುವುದು,
ಹುದ್ದೆಗಳನ್ನು ತಪ್ಪು ತಪ್ಪಾಗಿ ಹೇಳುವುದು, ಉಚ್ಚಾರ ದೋಷ, ಮರುಕಳಿಸುವ ವಾಕ್ಯಗಳು,
ಅಕ್ಷರಗಳನ್ನು ನುಂಗುವುದು ಢಾಳಾಗಿ ಬೇಡ ಬೇಡ ಅಂದರೂ ಕಿವಿಗೆ ಅಪ್ಪಳಿಸುತ್ತಿದೆ. ವಿಚಿತ್ರ
ಅಂದ್ರೆ ಕೇಳುಗರ ಪೈಕಿ ತುಂಬ ಮಂದಿಗೆ ಇದು ತಪ್ಪು ಅಂತ ಸಹ ಅರ್ಥ ಆಗ್ತಾ ಇಲ್ಲ.
4) ಜಾಲತಾಣದಲ್ಲಿ ನೂರಾರು ವೆಬ್ ಸೈಟ್ ಗಳಿವೆ, ಯೂಟ್ಯೂಬ್
ಚಾನೆಲ್ಲುಗಳಿವೆ, ಜಾಹೀರಾತುಗಳು ಬರ್ತವೆ... ತುಂಬ ಕಡೆ ಬಳಸುವ ಶೀರ್ಷಿಕೆ, ಆಡುವ ಮಾತು
ಯಾವುದರಲ್ಲೂ ವ್ಯಾಕರಣ ಇರುವುದೇ ಇಲ್ಲ. ನಿರ್ಭೀತಿಯಿಂದ ತಪ್ಪು ತಪ್ಪು ಕನ್ನಡವನ್ನು
ಬಳಸುತ್ತಾರೆ. ಗೂಗಲ್ ಟ್ರಾನ್ಸ್ಲೇಶನ್ ಕೊಟ್ಟದ್ದನ್ನು ನೇರವಾಗಿ ಕಾಪಿ, ಪೇಸ್ಟ್ ಮಾಡುತ್ತಾರೆ.
ರಂಗು ರಂಗಾಗಿ ಡಿಸೈನ್ ಮಾಡಿ ಹಾಕುತ್ತಾರೆ. ಇವುಗಳನ್ನು ಸ್ಟೇಟಸ್ಸುಗಳಲ್ಲಿ ಶೇರ್ ಮಾಡುವವರಿಗೂ
ಅವು ತಪ್ಪು ಅಂತ ಗೊತ್ತಾಗುವುದಿಲ್ಲ... ಇದರ ಪರಿಣಾಮಗಳ ಬಗ್ಗ ಬರೆಯಲು ಹೋದರೆ ದೊಡ್ಡ ಮಹಾಕಾವ್ಯ
ಆದೀತು... ಅದರ ಉಸಾಬರಿಯೇ ಬೇಡ ಬಿಡಿ.
ಯಾರೂ ಕೂಡಾ ತಪ್ಪುಗಳನ್ನು ಬೇಕೂಂತ ಮಾಡುವುದಿಲ್ಲ. ಆದರೂ ಸಮೂಹ ಮಾಧ್ಯಮಗಳ ತಪ್ಪುಗಳನ್ನು ಈ ರೀತಿ
ವಿಶ್ಲೇಷಿಸಬಹುದು.
1) ಅವಸರದಲ್ಲಿ, ಕಣ್ತಪ್ಪಿನಿಂದ ಆಗುವ ತಪ್ಪುಗಳು... ಇವು ತಪ್ಪುಗಳಲ್ಲ,
ಪ್ರಮಾದಗಳಲ್ಲಿ. ಇವುಗಳನ್ನು ಅರಿತುಕೊಂಡು ತಪ್ಪುಗಳನ್ನು ಸರಿಪಡಿಸಬಹುದು. ಮತ್ತು
ಸರಿಪಡಿಸಬೇಕಾದ್ದು ಮಾಧ್ಯಮ ಉದ್ಯೋಗಿಗಳ ಜವಾಬ್ದಾರಿ. ಇಂತಹ ತಪ್ಪುಗಳು ಮರುಕಳಿಸಿದರೆ ಖಂಡಿತಾ
ಅದು ಸಮರ್ಥನೀಯ ಅಲ್ಲ.
2) ತಪ್ಪುಗಳಾಗಿದ್ದನ್ನು ಬಲ್ಲವರು ತಿಳಿಸಿ ಹೇಳಿದರೆ ಒಪ್ಪದೆ, ಮತ್ತೆ
ಮತ್ತೆ ತಪ್ಪುಗಳನ್ನು ಮುಂದುವರಿಸುವುದು. ಸರಿ ಯಾವುದು ಅಂತ ತಿಳಿಯುವ ಪ್ರಯತ್ನ ಮಾಡದೇ ತಪ್ಪುಗಳನ್ನೇ
ಮುಂದುವರಿಸಿಕೊಂಡು ಹೋಗುವ ಉಡಾಫೆ.
3) ತಾನು ಹೇಳುತ್ತಿರುವುದು, ಬರೆಯುತ್ತಿರುವುದು ತಪ್ಪು ಎಂಬ ಅರಿವೇ
ಇಲ್ಲದೆ ತಪ್ಪು ತಪ್ಪಾಗಿ ಭಾಷೆಯನ್ನು ಬಳಸುವುದು ಮತ್ತು ಅವರ ಹಿರಿಯರು ಮತ್ತು ತಿಳಿದವರು ಯಾರೂ
ಅವರನ್ನು ತಿದ್ದುವ ಪ್ರಯತ್ನವೇ ಮಾಡದೆ ಅವರ ಧ್ವನಿಯನ್ನು, ಆಂಗಿಕವನ್ನು, ಓದುವ ಶೈಲಿಯನ್ನು
ಹೊಗಳುತ್ತಾ ಹೊಗಳುತ್ತಾ... ಪರೋಕ್ಷವಾಗಿ ಎಲ್ಲರೂ ಸೇರಿ ಅವರು ಕತ್ತು ಹಿಸುಕಿ ಭಾಷೆಯನ್ನು
ಕೊಲ್ಲುವುದನ್ನು ಪರೋಕ್ಷವಾಗಿ ಪ್ರಚೋದಿಸಿ ತಮಗೆ ಅರಿವೇ ಇಲ್ಲದೆ ಭಾಷೆಗೆ ನಿಧಾನ ವಿಷ ನೀಡಿ
ಸಾಮೂಹಿಕವಾಗಿ ಭಾಷೆಯನ್ನು ಕೊಲ್ಲುವುದು!
ನಾನು ಈ ಬರೆಹದಲ್ಲಿ
ಉಲ್ಲೇಖಿಸಿದ ಅಷ್ಟೂ ವಿಚಾರಗಳೂ ಈ ಮೂರನೇ ಮಾದರಿ ತಪ್ಪನ್ನೇ ಆಧರಿಸಿ ಹೇಳಿರುವಂಥದ್ದು. ನಾವು
ಬಳಸುತ್ತಿರುವ ಭಾಷೆ ಸರಿ ಇಲ್ಲ ಎಂಬ ಅರಿವೇ ಇಲ್ಲದೆ ನಿರ್ಭಿಡೆಯಿಂದ ತಪ್ಪು ತಪ್ಪಾಗಿ ಭಾಷೆ
ಬಳಸುತ್ತಿದ್ದೇವೆ. ದುರಾದೃಷ್ಟವಶಾತ್ ಆ ಭಾಷೆಯ ಓದುಗರು, ಕೇಳುಗರು, ವೀಕ್ಷಕರು ಅದು ತಪ್ಪು ಅಂತ
ಗುರುತಿಸಲಾಗದಷ್ಟು ವ್ಯಸ್ತರು ಅಥವಾ ಉದಾಸೀನರೂ ಆಗಿದ್ದಾರೆ. ಇವೆಲ್ಲದನ್ನೂ ಕಂಡು 60,70,80ರ
ದಶಕದಲ್ಲಿ ಹುಟ್ಟಿದವರು ಅಸಹನೆ ಕಾರುತ್ತಾ, ಅರಣ್ಯ ರೋದನ ಮಾಡುತ್ತಾ... ಕೂಗಾಡುತ್ತಾ ಓಡಾಡಿ
ತಮ್ಮ ಮನಃಶಾಂತಿಯನ್ನು ಕೆಡಿಸಿಕೊಳ್ಳುತ್ತಿದ್ದಾರೆ.
ತಂತ್ರಜ್ಞಾನ ಮತ್ತು
ತಲೆಮಾರು ವೇಗವಾಗಿ ಬದಲಾಗುತ್ತಿರುವಾಗ ಕೆಲವು ಬದಲಾವಣೆಗಳನ್ನು ತಿಪ್ಪರಲಾಗ ಹಾಕಿದರೂ ತಡೆಯಲು
ಸಾಧ್ಯವೇ ಇಲ್ಲ. ಒಂದೋ ನಾವದಕ್ಕೆ ಒಗ್ಗಿಕೊಳ್ಳಬೇಕು. ಅಥವಾ ಕಂಡರೂ ಕಾಣದಂತೆ ಸುಮ್ಮನಿರಲು
ಕಲಿಯಬೇಕು. ಇದು ಮನಃಶಾಂತಿ ಕಾಪಾಡುವ ದೃಷ್ಟಿಯಿಂದ ಒಳ್ಳೆಯದು... ಏನಂತೀರಿ?
-ಕೃಷ್ಣಮೋಹನ ತಲೆಂಗಳ (17.06.2025)
No comments:
Post a Comment