ಆ ಘಳಿಗೆ ದಾಟುವ ವರೆಗೆ...

ಆ ಬಾಲಕಿಗೆ ವೇದಿಕೆಯಲ್ಲಿ ಸ್ಪರ್ಧೆಯಲ್ಲಿ ಹಾಡಲಿಕ್ಕಿದೆ. ಇನ್ನೂ ಆಕೆಯ ನಂಬರು ಬಂದಿಲ್ಲ. ಒಬ್ಬರಾದ ಮೇಲೆ ಒಬ್ಬರು ಹಾಡುತ್ತಾ ಇದ್ದಾರೆ. ಆಕೆಯ ನಂಬರಿಗೆ ಕಾಯುತ್ತಿದ್ದಾಳೆ. ಸಭೆ ಕಿಕ್ಕಿರಿದು ತುಂಬಿದೆ. ಗಂಭೀರವದನರಾದ ಜಡ್ಜುಗಳು ಮಾರ್ಕು ಹಾಕುತ್ತಿದ್ದಾರೆ. ಆಕೆ ತುಂಬ ಸಲ ಪ್ರಾಕ್ಟೀಸು ಮಾಡಿ ಹಾಡು ಮನನ ಮಾಡಿಕೊಂಡಿದ್ದಾಳೆ. ಆದರೂ ಆಕೆಯ ನಂಬರು ಬರುವ ವರೆಗೆ ಏನೋ ತಳಮಳ...ಹೊಟ್ಟೆಯಲ್ಲಿ ತುಸು ಸಂಕಟ. ಎಷ್ಟೋ ಸ್ಟೇಜುಗಳಲ್ಲಿ ಹಾಡಿ ಗೊತ್ತಿದೆ. ಆದರೂ ಅರ್ಧದಲ್ಲಿ ಮೈಕು ಕೈಕೊಟ್ಟರೆ? ಗಂಟಲಲ್ಲಿ ಕಿಚ್ ಕಿಚ್ ಆದರೆ? ಸಾಲುಗಳು ಮರೆತು ಹೋದರೆ... ಜನ ನೋಡಿ ನಕ್ಕರೆ? .ಹೀಗೆ ಹೇಳಲಾಗದ ಸಂಕಟ.
ಯಾರಿಗೆ...
ಟೆನ್ಶನು ಹಾಡು ಹೇಳುವ ಹುಡುಗಿ ಮಾತ್ರವಲ್ಲ.... ಅವಳಿಗೆ ಹಾಡು ಕಲಿಸಿ ಕಳುಹಿಸಿಕೊಡಲು ಸಿದ್ಧವಾದ ಆಕೆಯ ಅಮ್ಮನಿಗೂ!!

ಕೊನೆಗೂ ಆಕೆಯ ನಂಬರು ಬಂದು ಸುಲಲಿತವಾಗಿ ಹಾಡಿ ಕೆಳಗಿಳಿದು ಬಂದ ಬಳಿಕ ದೊಡ್ಡದೊಂದು ಹೊರೆ ಇಳಿಸಿದ ಭಾವ. ಪ್ರೈಸು ಬಂದರೆಷ್ಟು, ಬಿಟ್ಟರೆಷ್ಟು ಹಾಡೊಂದು ಸುಸೂತ್ರವಾಗಿ ಹಾಡಿ ಆಯ್ತಲ್ಲ ಅನ್ನುವ ನಿರಾಳತೆ. ತುಂಬ ಹಗುರಾದ ಭಾವ. ಅಷ್ಟೆಲ್ಲ ಟೆನ್ಶನ್ ಬೇಕಿರ್ಲಿಲ್ವೇನೋ. ತುಂಬಾ ಸುಲಭವಾಗಿ ಹಾಡಿ ಮುಗಿಸಿದೆ ಅನ್ನುವ ನಂಬಿಕೆ ಹಾಡಿದ ಮೇಲೆ ಬರುತ್ತದೆ. ಆಕೆಯನ್ನು ಹಾಡುವುದಕ್ಕೆ ಕಳುಹಿಸಿ, ಕೊನೆಯ ವರೆಗೂ ಆತಂಕದಲ್ಲೇ ಕುಳಿತಿದ್ದ ಆಕೆಯ ಅಮ್ಮನಿಗೆ ಕೂಡಾ...

ಟೆನ್ಶನ್ ದೊಡ್ಡದಿರಬಹುದು, ಸಣ್ಣದಿರಬಹುದು, ತಲೆಗೆ ತೆಗೆದುಕೊಳ್ಳುವವರಿಗೆ ಪಾಲಿಗೆ ಅವೆಲ್ಲ ಸತ್ತು ಬದುಕುವ ಅನುಭವ ಅಂತೂ ಹೌದು. ಪರೀಕ್ಷೆಯ ಫಲಿತಾಂಶ ಬರುವ ವರೆಗೆ, ವೈದ್ಯಕೀಯ ಚೆಕಪ್ ಆಗಿ ಲ್ಯಾಬೊರೆಟರಿಗೆ ಯಾವುದೋ ಟೆಸ್ಟುಗಳ ಮಾದರಿ ಕಳುಹಿಸಿದ ಬಳಿಕ ಪಾಸಿಟಿವ್ವ, ನೆಗಿಟಿವ್ವ ಅಂತ ಗೊತ್ತಾಗೋ ವರೆಗಿನ ಆತಂಕ. ಪ್ರಾಣ ಹಿಂಡುವ ಟೆನ್ಶನು... ಹೀಗೆ ಫಲಿತಾಂಶ ಬಂದ ಬಳಿಕವಷ್ಟೇ ನಮ್ಮನ್ನು ಬದುಕಿಸುವ ಘಳಿಗೆಗಳವು. ಟೆನ್ಶನ್ ಮಾಡಿಕೊಳ್ಳುವುದೋ ಟೆನ್ಶನ್ ಆವರಿಸುವುದೋ ಅವು ನಮ್ಮ ಅನುಮತಿ ಕೇಳಿ ಬರುವುದಲ್ಲ. ಅನುಮತಿ ಕೇಳಿ ಹೆಗಲು ಬಿಟ್ಟು ಹೋಗುವುದೂ ಅಲ್ಲ. ಆ ಘಳಿಗೆ, ಆ ಪರಿಸ್ಥಿತಿ, ಆ ಸನ್ನಿವೇಶ ಅಂಥದ್ದೊಂದು ಸಂದರ್ಭವನ್ನು ಸೃಷ್ಟಿಸುವುದು ಅಂದರೆ ಒಪ್ತೀರ... ಎಷ್ಟೋ ಬಾರಿ ಟೆನ್ಶನ್ ವೃಥಾ ಆತಂಕವೂ ಇರಬಹುದು. ಕಲ್ಪನೆಯಲ್ಲೇ, ಊಹೆಯಲ್ಲೇ ಮುಂದಿನ ಸಾಧ್ಯಾಸಾಧ್ಯತೆಗಳ ಬಗೆಗಿನ ಋಣಾತ್ಮಕ ಚಿಂತನೆ ಸಾಕಷ್ಟು ಟೆನ್ಶನ್ ಗಳನ್ನು ಹುಟ್ಟು ಹಾಕಬಹುದು. ಆದು ಮನಸ್ಸಿನ ಮೇಲೆ, ಶರೀರದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ತಿಳಿದೋ ತಿಳಿಯದೆಯೋ.

ಡಾಕ್ಟ್ರುಗಳು ಹೇಳ್ತಾರೆ ಟೆನ್ಶನ್ ಮಾಡ್ಕೊಬೇಡಿ, ಸ್ಟ್ರೇಸ್ ತಗೋಬೇಡಿ ಅಂತ. ಆದರೆ ಕೆಲವರ ಸ್ವಭಾವವೇ ಆತಂಕಮಯವಾಗಿರ್ತದೆ. ಸದಾ ಗೊಂದಲ, ಆತಂಕ, ನೆಗೆಟಿವ್ ಚಿಂತನೆಗಳು. ಇನ್ನು ಕೆಲವರದ್ದು ಡೋಂಟ್ ಕ್ಯಾರ್ ಪ್ರವೃತ್ತಿ ಯಾವುದನ್ನೂ ತಲೆಗೆ ಗಂಭೀರವಾಗಿ ತೆಗೆದುಕೊಳ್ಳದೆ ಯಾರ್ಯಾರ ತಲೆಗೆ ಟೆನ್ಶನ್ನುಗಳು ಸುಲಭವಾಗಿ ದಾಟಿಸಿಬಿಟ್ಟು ತಾವು ಹಗುರಾಗಿರೋದು. ಇನ್ನೂ ಕೆಲವರಿರ್ತಾರೆ. ಒಳಗೊಳಗೆ ಟೆನ್ಶನ್ ಗಳಿದ್ದರೂ ಹೊರಗಡೆ ತೋರಿಸದೆ ಗಟ್ಟಿ ಮನಸ್ಸಿನವರಾಗಿ ತಮ್ಮ ಜೊತೆಗಾರರನ್ನೂ ಗಟ್ಟಿಯಾಗಿಸುವ ಧನಾತ್ಮಕ ಚಿಂತನೆಯ ಧೀರರು. ಕೆಲವರದ್ದು ಜನ್ಮತಹ ಸ್ವಭಾಬವಾದರೆ ಇನ್ನು ಕೆಲವರು ಬೆಳೆದು ಬಂದ ಬದುಕು ಕಲಿಸಿಕೊಟ್ಟ ಪ್ರವೃತ್ತಿ

ಕೆಲವೊಮ್ಮ ಸಣ್ಣ ಸಣ್ಣ ವಿಚಾರಗಳೂ ಕಾಡಬಹುದು. ನಿಮಗೆ ಎರಡು ನಿಮಿಷದಲ್ಲಿ ಬಸ್ ಬರಲಿದೆ. ಅದಕ್ಕೂ ಮುನ್ನ ನಿಮ್ಮ ಜೊತೆಯಲ್ಲಿದ್ದವರು ಈಗ ಚಹಾ ಕುಡಿದು ಬರುತ್ತೇನೆ ಅಂತ ಹೊಟೇಲಿಗೆ ಹೋಗಿರ್ತಾರೆ. ಎಷ್ಟು ಹೊತ್ತಾದರೂ ಬರುವ ಲಕ್ಷಣವಿಲ್ಲ. ಅಗೋ ದೂರದಲ್ಲಿ ಬಸ್ ಬಂದೇ ಬಿಡ್ತು. ನಿಮಗೆ ಪ್ರಾಣವೇ ಬಾಯಿಗೆ ಬಂದ ಅನುಭವ. ಅವರನ್ನು ಕರೆಯೋಣ ಅಂತಂದ್ರೆ ಅವರ ಫೋನು ಬಿಝಿ ಬರ್ತಿದೆ, ಕಾಲ್ ರಿಸೀವ್ ಆಗ್ತಿಲ್ಲ. ಈ ಬಸ್ ಹೋದರೆ ಮತ್ತೆ ಸದ್ಯಕ್ಕೆ ಬಸ್ಸಿಲ್ಲ, ಮನೆ ತಲಪೋವಾಗ ಲೇಟ್ ಆಗ್ತದೆ. ಹೊಟ್ಟೆಯೊಳಗೇನೇನೋ ಆದ ಹಾಗೆ, ತಲೆ ಸುತ್ತಿದ ಹಾಗೆ, ಬೆವರಿದ ಹಾಗೆ... ಯಾರಲ್ಲೂ ಹೇಳಿಕೊಳ್ಳಲಾಗದ ಸಂಕಟದ ಹಾಗೆ...
ಅಷ್ಟರಲ್ಲಿ ಸಿನಿಮೀಯವಾಗಿ ಬಸ್ಸು ನಿಮ್ಮೆದುರು ಬಂದು ನಿಲ್ಲುವುದಕ್ಕೂ ಹೊಟೇಲಿಗೆ ಹೋಗಿದ್ದ ನಿಮ್ಮ ಜೊತೆಗಾರರು ಹೊರ ಬಂದು ನಿಮ್ಜೊತೆಗೇ ಬಸ್ ಹತ್ತುವುದಕ್ಕೂ ಸರಿಯಾಗಿರ್ತದೆ ಟೈಮು. ಅವರು ಯಾವುದೇ ಟೆನ್ಶನ್ ಇಲ್ಲದೆ, ಹೋ ಬಸ್ ಸ್ವಲ್ಪ ಬೇಗ ಅಂತ ಆರಾಮವಾಗಿ ಚಾಕಲೇಟ್ ತಿನ್ತಾ ಇದ್ರೆ, ನಿಮಗಂತೂ ಹೋದ ಜೀವ ಮತ್ತೆ ಬಂದ ಅನುಭವ. ಅಲ್ವ?

ದಿನ ಬಿಟ್ಟು ದಿನ ಜ್ವರ ಬರ್ತಾ ಇದೆ. ಮಲೇರಿಯಾ ಇದೆಯಾ ಅಂತ ಡೌಟು. ಡಾಕ್ಟ್ರು ರಕ್ತಪರೀಕ್ಷೆಗೆ ಹೇಳಿದ್ದಾರೆ. ಸ್ಯಾಂಪಲ್ ಕೊಟ್ಟು ಬಂದಾಗಿದೆ. ನಾಳೆ ಫಲಿತಾಂಶ ಗೊತ್ತಾಗ್ತದೆ. ಅಲ್ಲಿವರೆಗೆ ನಿಮಗೆ ಟೆನ್ಶನ್ನು. ಏನಾಗ್ತದೋ ಏನೋ, ಒಂದು ವೇಳೆ ಮಲೇರಿಯಾವೇ ಆಗಿದ್ದರೆ ಅಡ್ಮಿಟ್ ಆಗ್ಬೇಕಾಗಬಹುದೇ, ಇಂಜಕ್ಷನ್ನು ಕೊಡಬಹುದೇ...? ಎಷ್ಟು ದಿನ ಬೇಕು ಕಮ್ಮಿಯಾಗೋಕೆ..?. ಹೀಗೆಲ್ಲ... ಫಲಿತಾಂಶ ಸಿಗೋವರೆಗೆ ಊಟ ಸೇರದವರು, ಮೊಬೈಲಿನಲ್ಲಿ ಬಂದ ಜೋಕುಗಳಿಗೆ ನಗಲಾರದವರು... ಇದ್ದಾರೆ. ಆದರೆ ಫಲಿತಾಂಶ ನಾರ್ಮಲ್ ಅಂತ ಬಂದಾಗ ದೊಡ್ಡದೊಂದು ಯುದ್ಧ ಗೆದ್ದ ಅನುಭವ. ಒಮ್ಮೆಲೇ ಜಗತ್ತು ಸುಂದರವಾದಂತೆ, ಹಗುರವಾದಂತೆ, ಎಲ್ಲವೂ ಚೆಂದ ಚೆಂದ ಇರುವಂಥಹ ಭಾಸ. ಟೆನ್ಶನ್ ಇದ್ದಾಗ ನಂಗೆ ಮಾತ್ರ ದುಖವ, ಜಗತ್ತೆಲ್ಲಾ ಮಾಮೂಲೇ ಇದೆಯಲ್ಲ. ಜನ ನಗು ನಗ್ತಾ ಇದ್ದಾರಲ್ಲ. ನನ್ನೊಳಗೆ ಮಾತ್ರ ಯಾಕೆ ಅಳು ಎಂಬಂಥ ಭಾವ.

ಜಗತ್ತು, ಸೋ ಕಾಲ್ಡ್ ಸಮಾಜ ಎಲ್ಲ ಮಾಮೂಲಾಗೆ ಇರುತ್ತದೆ. ಟೆನ್ಶನು, ದುಖ, ಖುಷಿ ಆವರಿಸುವುದು ಮನಸ್ಸಿಗೆ, ವ್ಯವಸ್ಥೆಗಲ್ಲ. ಮನಸ್ಸು ಮುದುಡಿದಾಗ, ಅರಳಿದಾಗ ಜಗತ್ತಿನೊಳಗಿಂದ ನಮ್ಮನ್ನು ನಾವು ನೋಡುವ ದೃಷ್ಟಿ ಬದಲಾಗಿರ್ತದೆ. ಸಾಕಷ್ಟು ಹೋಲಿಸಿಕೊಳ್ತೇವೆ ಸುತ್ತಮುತ್ತಲಿನವರೊಡನೆ ಅಲ್ವ. ಕೆಲಕಾಲದ ಆತಂಕ ಬದುಕಿನ ಅಷ್ಟೂ ಖುಷಿಯನ್ನು ಕಸಿದುಕೊಂಡಿರ್ತದೆ. ಆ ಕ್ಷಣ ದಾಟಿದ ಬಳಿಕ ಮತ್ತದೇ ಬದುಕು... ಮುಖವಾಡಗಳು, ಇಡೀ ಬದುಕೇ ಗೆದ್ದೆವೇನೋ ಎಂಬಂಥ ಹುಸಿ ಭಾವ... ಇನ್ನೊಂದು ಟೆನ್ಶನ್ ಆವರಿಸುವವರೆಗೆ!!!

No comments: