ಫ್ಲವರೇಟ್ ಬಿಡುವಾಗ ಅವರಿರಲೇ ಇಲ್ಲ...!!

14 ವರ್ಷಗಳ ಅಲ್ಲಿಗೆ ಸೇರುವಾಗ ಅವರೇ ಸ್ವತಹ ಸ್ವಾಗತಿಸಿ ರೀತಿ ರಿವಾಜುಗಳನ್ನು ತಿಳಿಸಿ ಬರಮಾಡಿಕೊಂಡಿದ್ದರು. ಆದರೆ ಮೊನ್ನೆ ಮೊನ್ನೆ ಆ ಮನೆ ಖಾಲಿ ಮಾಡುವಾಗ ಅವರ ಅನುಪಸ್ಥಿತಿ ತೀವ್ರವಾಗಿ ಕಾಡುತ್ತಿತ್ತು. ಕಾರಣ, ಕಳೆದ ಜನವರಿಯಲ್ಲೇ ಅವರು ಇಹಲೋಕ ತ್ಯಜಿಸಿದ್ದರು. ಅದಕ್ಕೂ ಒಂದೂವರೆ ವರ್ಷಕ್ಕೂ ಮೊದಲೇ ಅವರು ಸಕ್ರಿಯ ಬದುಕನ್ನು ಕಳೆದುಕೊಂಡು ಹಾಸಿಗೆವಾಸಿಯಾಗಿದ್ದರು...
ಆದರೆ ಆ "ಫ್ಲವರೆಟ್' ಮನೆ, ಹಸಿರ ಆವರಣ, ಪ್ರಶಾಂತತೆ ಹಾಗೂ ಅವರ ಸಹೃದಯತೆಯನ್ನೂ ಎಂದಿಗೂ ಮರೆಯಲಾಗದು. ಬದುಕಿನ ಪ್ರಮುಖ ಘಟ್ಟದಲ್ಲಿ ವಾಸಿಸಲು ಅವಕಾಶ ಸಿಕ್ಕ ಮಂಗಳೂರು ಕದ್ರಿ ಮಲ್ಲಿಕಟ್ಟೆಯಲ್ಲಿರುವ ದಿ ಫ್ಲವರೆಟ್ ಮನೆಯನ್ನು ಮೊನ್ನೆ ಮೊನ್ನೆ ತೊರೆದು ನಿಂತಾಗ ಅನಿಸಿದ್ದು ಇದು...


THE FLOWERET



net picture

net picture

ಜುಡಿತ್ ಮೇಡಂನ ಶಿಸ್ತಿಗೆ ಉದಾಹರಣೆ, ಅವರದೇ ಹಸ್ತಾಕ್ಷರ



ಅವರು ಮಂಗಳೂರಿನ ಮಾಜಿ ಉಪಮೇಯರ್, ಹಿರಿಯ ಸಮಾಜ ಸೇವಕಿ, ಶಿಸ್ತಿನ ಮಹಿಳೆ. ಹೆಸರು ಜುಡಿತ್ ಮಸ್ಕರೇನಸ್, ನಿವೃತ್ತ ಶಿಕ್ಷಕಿಯೂ ಹೌದು. ಅವಿವಾಹಿತರು. ಬದುಕಿನಲ್ಲಿ ಬಹಳಷ್ಟು ಮಂದಿಗೆ ಉಪಕಾರ ಮಾಡಿದವರು. ಹತ್ತಾರು ಸಂಘ ಸಂಸ್ಥೆಗಳಲ್ಲಿ ದುಡಿದವರು. ತಮ್ಮದೇ ಟ್ರಸ್ಟ್ ಗಳನ್ನು ಕಟ್ಟಿಕೊಂಡು ನೊಂದವರಿಗೆ ದನಿಯಾದವರು. ಅವರ ಮನೆಯಲ್ಲಿ ಒಟ್ಟು ಮೂರು ಮಂದಿಗೆ (ಪೇಯಿಂಗ್ ಗೆಸ್ಟ್) ಹಾಗೂ ಅವರ ಔಟ್ ಹೌಸಿನಲ್ಲಿ ಒಂದು ಕುಟುಂಬಕ್ಕೆ ಬಾಡಿಗೆಗೆ ಕೊಠಡಿಗಳನ್ನು ನೀಡಿದ್ದರು.

2002ರಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ಸೇರಿದ ನಾನು ಅಪರಾತ್ರಿ ಕೆಲಸ ಮುಗಿಸಿ 25 ಕಿ.ಮೀ.ದೂರದ ಮನೆಗೆ ಹೋಗುವುದು ಸುರಕ್ಷಿತವಲ್ಲ (ಜೊತೆಗೆ ವಾಹನವೂ ಇರಲಿಲ್ಲ) ಎಂಬ ಕಾರಣಕ್ಕೆ ಬಂಧುವೊಬ್ಬರ ಶಿಫಾರಿಸಿನಂತೆ ಅವರ ಮನೆಯ ಕೊಠಡಿಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಸೇರಿದೆ. ನನ್ನಂತೆ ಇತರ ಇಬ್ಬರೂ ಅದೇ ಮನೆಯಲ್ಲಿದ್ದರು. ಜೊತೆಗೆ ಜುಡಿತ್ ಮೇಂನ ಆಪ್ತ ಸಹಾಯಕಿ ಶ್ಯಾಮಲಾ ಮೇಡಂ ಅವರ ಅಡುಗೆಯವರು ಹಾಗೂ ಇನ್ನೊಬ್ಬ ಅಜ್ಜಿ ಬ್ರಿಜಿತ್.
ಅಂದು ಸೇರಿದ ಮನೆಯ ನಂಟು ಇಂದಿನವರೆಗೆ 2017 ಮೇ 31ರ ತನಕ ಸತತವಾಗಿ ಮುಂದುವರಿಯಿತು.
ಮೊದ ಮೊದಲು ಮೂರು ನಾಲ್ಕು ದಿನಕ್ಕೊಮ್ಮೆ ಮನೆಗೆ ಹೋಗುತ್ತಿದ್ದವರು, ಬಳಿಕ ಬೈಕ್ ಖರೀದಿಸಿದ ಬಳಿಕ ಪ್ರತಿದಿನ ರಾತ್ರಿ ರೂಮಿನಲ್ಲಿ ಉಳಿದುಕೊಂಡು ಬೆಳಗ್ಗೆದ್ದು ಮನೆಗೆ ಹೋಗಿ, ಮಧ್ಯಾಹ್ನ ಮತ್ತೆ ಕೆಲಸಕ್ಕೆ ಬರುತ್ತಿದ್ದೆ. ಇದು ಸುಮಾರು 13 ವರ್ಷಗಳಿಂದ ಅದೇ ಥರ ಮುಂದುವರಿದು ಬಂದಿತ್ತು.

2015 ಆಗಸ್ಟಿನಲ್ಲಿ, ಆರೋಗ್ಯವಂತರಾಗಿದ್ದ ಮೇಡಂ ಒಂದು ರಾತ್ರಿ ಇದ್ದಕ್ಕಿದ್ದಂತೆ ಮನೆಯೊಳಗೆ ಓಡಾಡುತ್ತಿದ್ದವರು ಕುಸಿದು ಬಿದ್ದರು. ಅವರ ಸಮಸ್ಯೆಗೆ ಪಕ್ಷವಾತ ಎಂಬ ಹೆಸರು ಬಂತು. ಅಂದು ಹಾಸಿಗೆ ಹಿಡಿದವರು ತುಸು ಚೇತರಿಸಿದರಾದರೂ ಮತ್ತೆ ಸಶಕ್ತರಾಗಿ ಎದ್ದೇಳಲಿಲ್ಲ... ಹಾಗೂ ಹೀಗು ದಿನ ದೂಡುತ್ತಾ ಬಂದು 2017 ಜನವರಿಯಲ್ಲಿ ನಿಧನರಾದರು.
ಅವರಿಚ್ಚೆಯಂತೆ ಅವರ ಕಾಲಾ ನಂತರ ಟ್ರಸ್ಟ್ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಗಳು ಅದೇ ಕಟ್ಟಡದಲ್ಲಿ ಮುಂದುವರಿಯಲಿರುವುದರಿಂದ ಆ ಮನೆಯನ್ನು ಬಿಡಬೇಕಾಗಿದ್ದು ಅನಿವಾರ್ಯವಾಯಿತು.

ಧರ್ಮಗಳ ಸಂಘರ್ಷ, ಸಂದೇಹದ ನಡುವೆ ಬದುಕುತ್ತಿರುವ ಈ ದಿನಗಳಲ್ಲಿ ಅನ್ಯಧರ್ಮವರೊಂದಿಗೆ ಎಷ್ಟು ಸಹಿಷ್ಣುವಾಗಿ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟವರು ಜುಡಿತ್ ಅವರು. ಎಂದಿಗೂ ತಮ್ಮ ಧರ್ಮದ ಬಗ್ಗೆ ಯಾವತ್ತೂ ಒಂದೇ ಒಂದು ಉದಾಹರಣೆ ಕೊಟ್ಟಿಲ್ಲ, ಕರೆದು ಏನನ್ನೂ ಹೇಳಿಲ್ಲ, ಬೋಧನೆ ಮಾಡಿಲ್ಲ. ಹಾಗೆ ನೋಡಿದರೆ ನಮ್ಮ ಅಷ್ಟಮಿ, ಚೌತಿ ಹಬ್ಬಗಳನ್ನು ಅಡುಗೆಯವರಿಗೆ ಹೇಳಿ ಕಡುಬು, ಪಾಯಸ ಮಾಡಿಸಿ ಬಡಿಸುತ್ತಿದ್ದರು. ಹುಟ್ಟಿನ ದಿನಗಳಂದು ಮರೆಯದೆ ವಿಶ್ ಮಾಡುತ್ತಿದ್ದರು. ಯಾವತ್ತೋ ಯಾವುದೋ ಕಾರಮಕ್ಕೆ ಬಡಿಸಿದ ಊಟದಲ್ಲಿ ಏನನ್ನೋ ಉಣ್ಣದಿದ್ದರೆ ಮರುದಿನ ಕರೆದು ಕೇಳುತ್ತಿದ್ದರು ಮಿಸ್ಟರ್ ಕೃಷ್ಣಮೋಹನ್ ನೀವು ಹೆಸರು ಹಾಕಿದ ಪದಾರ್ಥ ಯಾಕೆ ತಿನ್ನಲಿಲ್ಲ, ಅದು ಜೀವಕ್ಕೆ ಒಳ್ಳೆಯದು ಅಂತ.

ಅವರು ಶಿಸ್ತಿಗೆ ಹೆಸರುವಾಸಿ. ಯಾರನ್ನೂ ಅಪಾಯಿಂಟ್ ಮೆಂಟ್ ಇಲ್ಲದೆ ಭೇಟಿಯಾಗುತ್ತಿರಲಿಲ್ಲ. ಅನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವ. ಸಮಯಕ್ಕೆ ಸರಿಯಾಗಿ ಹೊರಡೋದು ಕಾರ್ಯಕ್ರಮಗಳಿಗೆ, ಸಾಕಷ್ಟು ಪೂರ್ವತಯಾರಿ ಮಾಡಿ ಹೋಗೋ ಸ್ವಭಾವ. ಯಾವತ್ತೂ ತಮ್ಮ ಬಾಡಿಗೆದಾರರನ್ನು ಹಿಯಾಳಿಸಿ, ನಿಂದಿಸಿ ಮಾತನಾಡಿಲ್ಲ, ಏಕಾಏಕಿ ಬಾಡಿಗೆ ಜಾಸ್ತಿ ಮಾಡಿದವರಲ್ಲ. ಅಸಲಿಗೆ ಅಡ್ವಾನ್ಸನ್ನೇ ತೆಗೆದುಕೊಂಡಿರಲಿಲ್ಲ. ನಾನು ಸೇರುವಾಗ ಆ ರೂಮಿಗೆ ಕೊಡ್ತಾ ಇದ್ದದ್ದು ಕೇವಲ 350 ರು. ನಾನು 14 ವರ್ಷಗಳ ಬಳಿಕ ಬಿಡುವಾಗ ಇದ್ದ ಬಾಡಿಗೆ 550 ರು. ಮಾತ್ರ. ಅವರ ಪಾಲಿಗೆ ಅದೊಂದು ವ್ಯವಹಾರ ಆಗಿರಲಿಲ್ಲ. ಮಾನವೀಯ ದೃಷ್ಟಿಯೂ ಇತ್ತು.
ಅವರು ಸ್ವತ ತಮ್ಮ ಧರ್ಮದವರೆಂಬ ಪಕ್ಷಪಾತಿಯೂ ಆಗಿರಲಿಲ್ಲ. ಒಂದು ನಿರ್ದಿಷ್ಟ ಪಂಡಗದ ಬಾಡಿಗೆದಾರರಿಗೆ ಮಾತ್ರ ಕೊಠಡಿ ನೀಡುವುದೆಂಬ ಸ್ವಯಂ ಶಿಸ್ತು ಅವರೇ ಹಾಕಿಕೊಂಡಿದ್ದರು, ಕಾರಣ ಗೊತ್ತಿಲ್ಲ. ಇನ್ಯಾರೂ ಬಂದರೂ ಕೊಠಡಿ ಕೊಡುತ್ತಿರಲಿಲ್ಲ. ಅವರ ಧರ್ಮದವರು ಬಂದರೂ ಆಷ್ಟೇ. ಯಾವ ಶಿಫಾರಸಿಗೂ ಬಗ್ಗುತ್ತಿರಲಿಲ್ಲ. ಇದೆಲ್ಲ ಉತ್ಪ್ರೇಕ್ಷೆಯಲ್ಲ... ಕಂಡದ್ದು.

ಪ್ರತಿದಿನ ಬೆಳಗ್ಗೆದ್ದು ಚರ್ಚಿಗೋ ಹೋಗೋರು. ದೇವರ ಬಗ್ಗೆ ಅಪಾರ ನಂಬಿಕೆ. ದಿನಪೂರ್ತಿ ಬ್ಯುಸಿ ಇರ್ತಾ ಇದ್ರು. ಅಚ್ಚುಕಟ್ಟಾಗ ಸೀರೆ ಧರಿಸಿ ಹೊರಡೋರು. ಬಡವರಿಗೆ ಉಚಿತವಾಗಿ ಕೆಲಸ ಕೊಡಿಸುವ ಸೇವೆ ಮಾಡುತ್ತಿದ್ದರು. ಕುಷ್ಠ ರೋಗಿಗಳಿಗೆ ಆಶ್ರಯ ನೀಡುವ ಆಶ್ರಮ ನಡೆಸುತ್ತಿದ್ದರು. ಬಡಬಗ್ಗರಿಗೆ ಬಟ್ಟೆ ನೀಡುವುದು ಮತ್ತಿತರ ಹತ್ತಾರು ಜನಪರ ಕಾರ್ಯಗಳು ಅವರ ಮೂಲಕ ನಡೆಯುತ್ತಿತ್ತು. ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಅನ್ಯಾಯದ ವಿರುದ್ಧ ಹೋರಾಟದಲ್ಲಿ ಸದಾ ಮುಂದು. ಜೆಡಿಎಸ್ ಅಭ್ಯರ್ಥಿಯಾಗಿ ಮಂಗಳೂರು ಮಹಾನಗರ ಪಾಲಿಗೆಯ ಉಪ ಮೇಯರ್ ಆಗಿದ್ದರು. ಆದರೆ ಕೊನೆಯ ವರೆಗೂ ಸ್ವಂತ ವಾಹನ ಇರಿಸದೆ ಜನಸಾಮಾನ್ಯರ ಹಾಗೆ ನಗರದೆಲ್ಲೆಡೆ ಆಟೋದಲ್ಲೋ ನಡೆದುಕೊಂಡು ಓಡಾಡುತ್ತಲೋ ಗಮನ ಸೆಳೆಯುತ್ತಿದ್ದರು.

ಸಮಯ ಪಾಲನೆ ತಪ್ಪಿದರೆ ಸಹಿಸುತ್ತಿರಲಿಲ್ಲ. ಅಶಿಸ್ತು ಕಂಡರೆ ಆಗುತ್ತಿರಲಿಲ್ಲ. ಎಲ್ಲವೂ ಸಮಯಕ್ಕೆ ಸರಿಯಾಗಿ ಆಗಬೇಕು. ಅವರೂ ಅಷ್ಟೇ ಹಳಿದ್ದಕ್ಕಿಂತ ಐದು ನಿಮಿಷ ಮುಂಚಿತವಾಗಿ ತಯಾರಾದಾರೇ ವಿನಹ ವಿಳಂಬ ಮಾಡಿದವರಲ್ಲ.

ಆ ಮನೆಯ ಪುಟ್ಟ ಕೊಠಡಿಯಲ್ಲಿ ಕಳೆದ ಈ ಸುದೀರ್ಘ ಅವಧಿ ಬದುಕಿನ ಅಮೂಲ್ಯ ದಿನಗಳೂ ಹೌದು. ವೃತ್ತಿ ಬದುಕಿಗೆ ಕಾಲಿಟ್ಟ ಆರಂಭದ ತಿಂಗುಗಳಿಂದ ಇಂದಿನ ವರೆಗೆ. ಮೊದಲು ಕೊಠಡಿಯಿಂದ ನಡೆದುಕೊಂಡು ಹೋಗುವಷ್ಟು ದೂರವಿದ್ದ ಕಚೇರಿ ನಂತರ ದೂರಕ್ಕೆ ಸ್ಥಳಾಂತರವಾದಾಗ ವಾಹನ ಕೊಳ್ಳುವುದು ಅನಿವಾರ್ಯವಾಯಿತು. ಆ ದಿನಗಳಲ್ಲಿ ರಾತ್ರಿ 8 ಗಂಟೆಯ ವೇಳೆಗೆ ಊಟದ ವಿರಾಮದ ಸಂದರ್ಭ ರೂಮಿಗೆ ಬಂದಾಗ ಊಟ ಮಾಡುತ್ತಾ ಮೆಚ್ಚಿನ ಆಕಾಶವಾಣಿಯಲ್ಲಿ ಯುವವಾಮಿ ಕೇಳುತ್ತಿದ್ದ ನೆನಪು ಮರೆಯಲು ಸಾಧ್ಯವಿಲ್ಲ. ಮೊದಲಿಗೆ ಬೈಕ್ ಕೊಂಡಿದ್ದು, ಮೊಬೈಲ್ ಕೊಂಡಿದ್ದು, ಹುಟ್ಟಿದದಿನಕ್ಕೆ ಶುಭಾಶಯ ಪತ್ರಗಳು ಬರ್ತಾ ಇದ್ದದ್ದು, ವಿದೇಶದಲ್ಲಿದ್ದ ಗೆಳೆಯ ಫಾರೂಕ್ ನಿರಂತರವಾಗಿ ಕಳುಹಿಸ್ತಾ ಇದ್ದ ಸುದೀರ್ಘ ಪತ್ರಗಳನ್ನು ಓದ್ತಾ ಇದ್ದದ್ದು, ಅನೇಕ ಲೇಖನಗಳನ್ನು, ರೇಡಿಯೋಗೆ ಕೊಡುವ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಮಾಡಿದ್ದು ಎಲ್ಲ ಅಲ್ಲಿಯೇ...
ಸ್ನೇಹಿತರನ್ನು ಗಳಿಸಿದ್ದು, ಕಳೆದುಕೊಂಡದ್ದು, ಬೆಳೆದದ್ದು, ಬರೆದದ್ದು, ಓದಿದ್ದು, ಆಡಿದ್ದು... ಎಲ್ಲ ಬೆಳೆಯುತ್ತಾ ಬೆಳೆಯುತ್ತಾ ಅಲ್ಲಿಯೇ...


 ಹಾಗಾಗಿ ಅದು ಬದುಕಿನ ಹಲವು ಅನುಭವಗಳಿಗೆ ಸಾಕ್ಷಿಯಾದ ಕೊಠಡಿ. ಪಾರಂಪರಿಕ ಕಟ್ಟಡದ ಹಾಗಿರುವ ಭವ್ಯ ಸೌಧ. ನನ್ನ ಪಾಲಿಗೆ ಸೌಧ ಮಾತ್ರವಲ್ಲ. ಒಂದು ಗಟ್ಟಿಯಾದ ನೆನಪು... ಶುಭ್ರವದನದ ಜುಡಿತ್ ಮೇಡಂನ ಹಾಗೆ... ಇನ್ನೆಂದೂ ಸಿಗಲಾಗದ ಅಪರೂಪದ ಅನುಭವ ಶಾಲೆ.

1 comment:

suresha belagaje said...

ಸದಾ ಕ್ರಿಯಾಶೀಲ ವ್ಯಕ್ತಿತ್ವ. ಉದಯವಾಣಿ ವರದಿಗಾರನಾಗಿ ಹಲವು ಬಾರಿ ಅವರನ್ನು ಭೇಟಿ ಮಾಡಿದ್ದೆ. ಮಿತ್ರನ ಜೊತೆ ಫ್ಲವರೆಟ್ ಗೆ ಒಮ್ಮೆ ಹೋಗಿ ಬಂದಿದ್ದೆ