ಅಂತರಂಗದ ಅರ್ಥಶಾಸ್ತ್ರ!

ಅಪಾರ್ಥ ಮಾಡಿಕೊಳ್ಳುವ ಮೊದಲು ಅರ್ಥ ಮಾಡಿಕೊಳ್ಳುವುದು ಅತ್ಯುತ್ತಮ ಅರ್ಥೈಸಿಕೊಳ್ಳುವಿಕೆಯಂತೆ. ಹೌದಲ್ವೇ... ಅರ್ಥವಾಗದಿದ್ದರೆ ತಲೆ ಬಿಸಿ ಬೇಡ. ಅರ್ಥವಾಗದ್ದು ಜಗತ್ತಿನಲ್ಲಿ ಸಾಕಷ್ಟಿವೆ. ನಮಗೇ ಕೆಲವೊಮ್ಮೆ ನಾವು ಅರ್ಥವಾಗದ ಹಾಗೆ, ವಿವೇಚನೆಗೆ ಮೊದಲು ನಾಲಿಗೆ ಮಾತನಾಡಿದ ಹಾಗೆ. ಮಾತಿಗೆ ಮೊದಲು ಬೆರಳು ಮೆಸೇಜ್ ಟೈಪಿಸಿದ ಹಾಗೆ. ಅಲ್ವ

ನಿರೀಕ್ಷೆ, ಕಲ್ಪನೆ, ಗ್ರಹಿಕೆ ಮತ್ತು ಅರ್ಥವಾಗುವಿಕೆಗೆ ಪರಸ್ಪರ ಸಂಬಂಧವಿಲ್ವ. ಯಾರೋ ಹೀಗೆಯೇ ಅಂತ ನಮ್ಮದೇ ಒಂದು ಲೆಕ್ಕಾಚಾರ, ಅವರು ಹೀಗಿರಬಹುದ ಎಂಬ ಕಲ್ಪನೆ, ಅವರು ಬಹುಷಹ ಹೀಗೆಯೇ ಎಂಬ ಗ್ರಹಿಕೆ (ಸರಿಯೋ, ತಪ್ಪೋ) ಗಳೆಲ್ಲ ಸೇರಿ ಅರ್ಥವಾಗುವುದನ್ನು ನಿರ್ಧರಿಸುವುದಲ್ವ.
ವ್ಯಕ್ತಿಗಳು, ಪರಿಸ್ಥಿತಿಗಳು, ಸಂಬಂಧಗಳು ಟಿ.ವಿ.ಯ ಧಾರಾವಾಹಿ ಥರ ಅಥವಾ ಸಿನಿಮಾ ಪರದೆ ಥರ ಅಲ್ಲ. ಕತೆ, ಉಪಕತೆಗಳೊಂದಿಗೆ ವಿವರಣೆ ನೀಡಲು. ಬದುಕು ಅನಿರೀಕ್ಷೀತ, ಊಹೆಗಿಂತಲೂ ವೇಗವಾಗಿ ಬದಲಾಗಬಹುದಾದ್ದು ಹಾಗೂ ಅದು ಸಂಭವಗಳ ಸರಣಿ. ಅಲ್ಲಿ ವ್ಯಕ್ತಿಗಳು, ಪರಿಸ್ಥಿತಿಗಳು, ಖುಷಿ, ದುಖ, ಸವಾಲುಗಳೆಲ್ಲ ಅವರವ ಮೂಗಿನ ನೇರಕ್ಕೆ, ಗ್ರಹಿಕೆಯ ಮಟ್ಟಕ್ಕೆ ಅರ್ಥವಾಗುವಂಥದ್ದು. ಶೇ. ಇಂತಿಷ್ಟು ಅರ್ಥವಾಗಿದೆ, ಅರ್ಥ ಮಾಡಿಕೊಂಡಿದ್ದೇನೆ ಅಂತಲೂ ಧೈರ್ಯದಿಂದ ಕೆಲವೊಮ್ಮೆ ಹೇಳುವ ಹಾಗಿಲ್ಲ. 


ಡಿಕ್ಷ್ನರಿ ಹಿಡಿದು ಪದಗಳಿಗೆ ಅರ್ಥ ಹುಡುಕುವುದಕ್ಕೂ ಮನಸುಗಳನ್ನು ಹಿಂಬಾಲಿಸಿ ಅರ್ಥ ಮಾಡುವುದಕ್ಕೂ ಅಥವಾ ಆಗುವುದಕ್ಕೂ ವ್ಯತ್ಯಾಸವಿದೆ. ಎಷ್ಟೋ ಮಂದಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಅನ್ನುವ ಭ್ರಮೆ ನಮ್ಮೊಳಗಿರುತ್ತದೆ. ಆದರೆ, ಏನೋ ಅನುಭವದ ಬಳಿಕ, ಅಥವಾ ಇನ್ನೇನೋ ಸಂಭವಿಸಿದ ಮೇಲೆ ಗೊತ್ತಾಗುವುದು ಅವನನ್ನು ಅರ್ಥ ಮಾಡಿಕೊಂಡದ್ದಕ್ಕಿಂತ ಹೆಚ್ಚಿನದ್ದು ಇನ್ನೂ ಅರ್ಥ ಮಾಡುವುದಕ್ಕಿದೆ ಅಂತ. ಅಲ್ಲಿಯ ವರೆಗೆ ಅರ್ಥವಾಗಿದೆ, ಅರ್ಥವಾದವರು ಎಂಬ ಭ್ರಮೆ ನಮ್ಮನ್ನು ಆವರಿಸಿರುತ್ತದೆ. ಅದು ಸ್ವತಹ ನಮಗೆ ತಿಳಿಯುತ್ತದೆ. ಅಂದರೆ, ಅದರ ಅರ್ಥವೇನು....


ನಮ್ಮ ಗ್ರಹಿಕೆಯ ಶಕ್ತಿಯೇ ನಮಗೆ ಅರ್ಥವಾಗಿಲ್ಲ ಎಂದಲ್ಲವೇ... ಅರ್ಥವಾಗಿದ್ದು, ಅಥವಾ ಅರ್ಥ ಮಾಡಿಕೊಂಡದ್ದು ಎಂಬ ನಂಬಿಕೆಯಷ್ಟೇ ನಮಗೆ ಅರ್ಥವಾಗಿದ್ದು ಬಿಟ್ಟರೆ, ಅರ್ಥ ಮಾಡಿಕೊಂಡಿರುವುದು ಬೇರೆಯೇ ಆಗಿರುತ್ತದೆ. ಅಂತಹ ತಪ್ಪು ಅರ್ಥೈಸುವಿಕೆ ಅಥವಾ ಭಾಗಶಹ ಅರ್ಥೈಸಿಕೊಳ್ಳುವಿಕೆಗಳಿಂದಲೇ ನಾವು ವ್ಯಕ್ತಿಗಳ ಜೊತೆಗಿನ ಒಡನಾಟದಲ್ಲಿ ನಿರಾಸೆ ಅನುಭವಿಸುವುದು, ಅವಮಾನಿತರಾಗುವುದು, ನಿರ್ಲಕ್ಷಿಸಲ್ಪಡುವುದು, ಏಕಾಂಗಿ ಅನಿಸುವುದು ಅಥವಾ ಪ್ರತ್ಯೇಕವಾಗಿರುವಂಥಾಗುವುದು. ಹಾಗಂತ ಅನಿಸೋದಿಲ್ವ ನಿಮಗೆ.

ನಾವು ಬೆಳೆದು ಬಂದ ವಾತಾವರಣ, ಸಮುದಾಯ, ಪರಿಸರ, ಪಡೆದ ಶಿಕ್ಷಣ, ಮನೆಯ ಪರಿಸ್ಥಿತಿ, ನೆರೆಹೊರೆ ಎಲ್ಲದರ ಆಧಾರದಲ್ಲಿ ನಮ್ಮ ಗ್ರಹಿಕೆಯ ಶಕ್ತಿ, ಅರ್ಥೈಸುವಿಕೆಯ ಶಕ್ತಿಯೂ ರೂಪುಗೊಂಡಿರುತ್ತದೆ ಅನ್ಸಲ್ವ. ಅವರವರ ಹಿನ್ನೆಲೆ, ಅವರವರ ಜೀವನ ಶೈಲಿಯೂ ಅರ್ಥ ಮಾಡಿಕೊಳ್ಳುವ ಭಾಗದ ಮೇಲೆ ಪರಿಣಾಮ ಬೀರುತ್ತದೆ. 


ಕೆಲವೊಮ್ಮೆ ನಮ್ಮ ಮೂಗಿನ ನೇರಕ್ಕೆ ಆಗುವ ಆಲೋಚನೆಗಳು, ಸದ್ಯ ನಾವಿರುವ ಪರಿಸ್ಥಿತಿ, ನಮ್ಮ ಮೂಡ್ ಎಲ್ಲವೂ ಇನ್ನೊಬ್ಬರ ಜೊತೆಗಿನ ಒಡನಾಟ, ಸಂವಹನ, ಆ ಕ್ಷಣದ ಅರ್ಥ, ಅಪಾರ್ಥಗಳನ್ನು ನಿರ್ಧಿರಿಸುತ್ತವೆ. ಇದೇ ಕಾರಣಕ್ಕೆ ತಕ್ಷಣಕ್ಕೆ ಸಿಡುಕೋದು, ಹಂಗ್ಸೋದು, ನೋಯೋದು, ಅಪಮಾನಿತರಾಗುವುದು ಎಲ್ಲ ಆಗುವುದು... ಅಲ್ವ.


ಕೊಡೆ ಹಿಡಿದವನಿಗೆ ಸೂರ್ಯ ಕಿರಣ ಅಪ್ಯಾಯಮಾನವಾದರೆ, ಬರಿಗಾಲಲ್ಲಿ ನಡೆದವನಿಗೆ ಕಾಲು ಸುಡುವ ಬೆಂಕಿ ಅನ್ನಿಸಬಹುದೇ. ಇಬ್ಬರಿಗೂ ಸೂರ್ಯನೊಬ್ಬನೇ ಆದರೂ ಇಬ್ಬರ ಹಿನ್ನೆಲೆಯಲ್ಲಿ ಸೂರ್ಯನ ಪ್ರಾಮುಖ್ಯತೆ ನಿರ್ಧಾರವಾಗುತ್ತದೆ. ಅವರವ ಗ್ರಹಿಕೆಯೇ ಬೇರೇ ಬೇರೆ ಇರುತ್ತದೆ. ಒಬ್ಬನಿಗೆ ಮಳೆ ಖುಷಿಯಾದರೆ, ಕೊಡೆ ತಾರದವನು ಮಳೆಗೆ ಶಾಪ ಹಾಕುತ್ತಿರುತ್ತಾನೆ.
ಅರ್ಥೈಸಿಕೊಳ್ಳುವುದೂ ಹಾಗೆ. ನಾವು ಯಾರನ್ನಾದರೂ ಸಂಶಯದ ದೃಷ್ಟಿಯಿಂದ ನೋಡುತ್ತಾ ಹೋದರೆ ಎಲ್ಲವೂ ಅನುಮಾನಾಸ್ಪದವಾಗಿ ಕಾಣಬಹುದು. ಅದೇ ಅತಿಯಾಗಿ, ಅಂಧರಾಗಿ ನಂಬುತ್ತಾ ಹೋದರೆ ಅದು ಮಿತಿಮೀರಿದ ಮುಗ್ಧತೆಯಾಗಿ ವ್ಯತಿರಿಕ್ತಿ ಪರಿಣಾಮವನ್ನೂ ಬೀರಬಹುದು. 


ನಾವು ಖುಷಿಯಾಗಿದ್ದಾಗ ಜಗತ್ತೂ ಸುಂದರವಾದಂತೆ, ನಮ್ಮ ಮೂಡ್ ಕೆಟ್ಟು ಹೋದಾಗ ಜಗತ್ತೇ ನಮ್ಮ ಮೇಲೆ ಹರಿಹಾಯ್ದಂತೆ, ದೂರ ಮಾಡಿದಂತೆ ಭಾಸವಾಗುವುದು ಆ ಕಾಲಘಟ್ಟಕ್ಕೆ ಮಾತ್ರ. ತಿರುಗುವ ಭೂಮಿಯ ಹಾಗೆ ಚಿಂತಿಸುವ ಮನಸ್ಸಿನಲ್ಲೂ ತೆರೆಗಳು, ಯುದ್ಧಗಳು, ಓಟಗಳು, ಮುಳುಗುವುದು ಎಲ್ಲ ನಡೆಯುತ್ತಿರುತ್ತದೆ. ಹೊರೆಗ ಶಾಂತಚಿತ್ತವಾಗಿ ಕಾಣಿಸುವುದರ ಒಳಗೂ ಜ್ವಾಲಾಮುಖ ಸಿಡಿಯುತ್ತಿರುವುದರ ದರ್ಶನವಾಗಬೇಕಾದರೆ ಮೂಡನ್ನು ಹಾಗ್ಹಾಗೇ ಹರಿಯಬಿಡಬೇಕು. ಆಗ ವ್ಯಕ್ತಿಯ ವಿಶ್ವರೂಪದರ್ಶನವಾಗುವುದು.


ಇನ್ನೊಬ್ಬರು (ಸ್ನೇಹಿತರು, ಸಂಬಂಧಿಗಳು, ಸಹೋದ್ಯೋಗಿಗಳು) ನನ್ನ ಯೋಚನೆಯೇ ನೇರಕ್ಕೇ ಇರಬೇಕು ಎಂದು ನಿರೀಕ್ಷಿಸುವುದು ಯಾವ ಕಾರಣಕ್ಕೂ ಸೂಕ್ತವಲ್ಲ. ಏನಂತೀರಿ. ಅವರವ ಬದುಕಿನ ಪರಿಸ್ಥಿತಿ, ಅವಕಾಶ, ದೃಢತೆಯ ಆಧಾರದಲ್ಲಿ ಅವರ ವ್ಯಕ್ತಿತ್ವ, ಚಿಂತನೆ, ನಡವಳಿಕೆ ರೂಪುಗೊಂಡಿರುತ್ತದೆ. ಅವರು ನಮ್ಮ ಸ್ನೇಹಿತರಾದರು ಎಂಬ ಕಾರಣಕ್ಕೆ ನಮ್ಮ ಮೂಗಿನ ನೇರಕ್ಕೆ ಅವರೂ ಯೋಚಿಸಬೇಕು, ಸ್ಪಂದಿಸಬೇಕು ಎಂದು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ. ಅಲ್ವ.


ಯಾವ ಥರ ನಮಗೂ ವೈಯಕ್ತಿಕ ಸಮಸ್ಯೆಗಳು, ಕಷ್ಟಗಳು, ಇಬ್ಬಂದಿಗಳು ಇರುತ್ತದೋ, ಪ್ರಪಂಚದ ಪ್ರತಿಯೊಬ್ಬನಿಗೂ ಅದಿರುತ್ತದೆ. ಅದರ ಸಮಯಗಳಲ್ಲಿ, ತೀವ್ರತೆಯಲ್ಲಿ ವ್ಯತ್ಯಾಸವಿರಬಹುದು. ಆದರೆ ನಾವು ಕ್ಷೋಭೆಯಲ್ಲಿದ್ದಾಗ, ಹತಾಶೆಯಲ್ಲಿದ್ದಾಗ, ದುಖದಲ್ಲಿದ್ದಾಗಲೆಲ್ಲಾ ಮನಸು ವಿವೇಚನೆಯನ್ನು ಕಳೆದುಕೊಂಡು ಬಿಟ್ಟಿರುತ್ತದೆ. ಅರ್ಥಕ್ಕಿಂತ ಅಪಾರಥಗಳೇ ಜಾಸ್ತಿಯಾಗುತ್ತವೆ. ಆಗ ಮಾತನಾಡಹೊರಟರೆ ಅದರಲ್ಲಿ ಅಪಾರ್ಥಗಳು ಜಾಸ್ತಿ ತುಂಬಿರುತ್ತವೆ. ಹಾಗನ್ಸಲ್ವ.
ಅಪಾರ್ಥ ಮಾಡಿಕೊಳ್ಳುವ ಮೊದಲು ಒಂದು ಕ್ಷಣ ಅವರ ಜಾಗದಲ್ಲಿ ನಿಂತು ಯೋಚಿಸಿದರೆ, ವೈಚಾರಿಕವಾಗಿ, ತಾರ್ಕಿಕವಾಗಿ ಚಿಂತಿಸಿದರೆ ಅಪಾರ್ಥವಾಗಿದ್ದು ಎಂತಹ ದುರ್ಬಲ ಘಳಿಗೆಯಲ್ಲಿ ಎಂಬುದು ನಮಗೇ ಅರಿವಾಗುತ್ತದೆ.
ದುಡುಕುವ ಮೊದಲು, ಅಪಾರ್ಥವಾಗುವ ಮೊದಲು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. 


ಅರ್ಥವಾಗದ್ದನ್ನು ಅರ್ಥವಾಗಿದೆಯೆಂದುಕೊಂಡು, ಅರ್ಥವಾಗಿದ್ದನ್ನೂ ಅರ್ಥೈಸಿಕೊಳ್ಳದೆ, ಅರ್ಥಕ್ಕಾಗಿ ಹುಡುಕಾಡಿ, ನಮಗೆ ನಾವೇ ಅಪಾರ್ಥವಾಗದೆ, ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮೊದಲು ತಾಳ್ಮೆಯಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುವುದೇ ಲೇಸು.


No comments: