ತೋಚಿದ್ದು... ಗೀಚಿದ್ದು 1




ಒಂದಷ್ಟು ನಿರೀಕ್ಷೆ ಬೇಕೆಂದು ಮೂಡಿದ್ದೋ, ಆವರಿಸಿದ್ದೋ...
ನಿರೀಕ್ಷೆಗೆ ವ್ಯತಿರಿಕ್ತಗಳಾದಾಗ ಭಾವಶೂನ್ಯ
ಮನುಷ್ಯ ಸಹಜ ಗುಣ.
ತೆಗೆದುಕೊಂಡ ನಿರ್ಧಾರಗಳು ಜಾರಿಯಾದ ಕೆಲವೇ ದಿನಗಳಲ್ಲಿ ಮತ್ತೆ ನಿರ್ಧಾರಗಳ ಹಿಂದಿನ ಗಟ್ಟಿನತನ ಕರಗಿ ಶಿಥಿಲಗಾವುದೇ ಬಹುಷಹ ಇದಕ್ಕೆಕಾರಣ.
ಸಿದ್ಧಾಂತಗಳು, ಬೌದ್ಧಿಕ ಬರಹಗಳು ಹೇಳುವುದನ್ನು ಕೇಳಿಯೋ, ಓದಿಯೋ, ಅರ್ಥ ಮಾಡಿಕೊಂಡರೂ ನಿತ್ಯಜೀವನದಲ್ಲಿ ನಿರ್ಧಾರಗಳನ್ನು ನಿರ್ಧರಿಸುವ ಅಂಶಗಳೇ ಬೇರೆ ಇರುತ್ತವೆ. ಅಲ್ಲಿ ಹಸಿವು, ಬಾಯಾರಿಕೆಯ ಥರಹವೇ ನಿರೀಕ್ಷೆಗಳೂ ಮೂಡಿಯೇ ಮೂಡುತ್ತವೆ.

ನಮ್ಮ ಕುರಿತು ನಾವು ನಿರ್ಧಾರಗಳನ್ನು ಕೈಗೊಳ್ಳಬಹುದೇ ಹೊರತು. ಸುತ್ತಮುತ್ತಲಿನವರು ನಾನು ಹೇಳಿದಂತೆ, ನಾನು ನಿರ್ಧರಿಸಿದಂತೆ, ನನ್ನ ನಂಬಿಕೆಯಂತೆ ಬದುಕಬೇಕು, ಆಡಬೇಕು ಎಂದುಕೊಂಡರೆ ಅದು ಅಸಹಜವೇ ಸರಿ. ನಿರೀಕ್ಷೆಗಳ ಮಿತಿ ನಮ್ಮ ಮಿತಿಯೊಳಗೆ, ನಮ್ಮೊಳಗೊಂದು ಬದಲಾವಣೆ ತರುವ ಮಟ್ಟಿಗೆ ಇದ್ದರೆ ಉತ್ತಮ. ಅದರಾಚೆಗಿನ ವ್ಯಕ್ತಿತ್ವಗಳು, ಅವರ ನಡೆ ನುಡಿ, ಅವರ ಅಭಿರುಚಿಗಳು ಅವರು ನಿಮ್ಮ ಸ್ನೇಹಿತರೇ ಆಗಲಿ, ಬಂಧುಗಳೇ ಆಗಲಿ ನಿರ್ಧರಿಸುವವರು, ನಿರೀಕ್ಷಿಸುವವರು ನೀವಲ್ಲ ಎಂಬುದು ತಿಳಿದಿದ್ದರೆ ಒಳಿತು. ಎಷ್ಟೋ ಬಾರಿ ವಿರುದ್ಧ ಧ್ರುವಗಳೂ ಸ್ನೇಹಿತರಾಗುತ್ತವೆ ಯಾಕಂದರೆ ಅವರನ್ನು ಇದ್ದ ಹಾಗೆ ಸ್ವೀಕರಿಸುವುದರಿಂದ ಯಾವುದೋ ಕಾಮನ್ ಫ್ಯಾಕ್ಟರ್ ಅವರನ್ನು ಬಂಧಿಸಿರುತ್ತದೆ ಹೊರತು ಅವರಿಗೆ ಪರಸ್ಪರ ಆಗದ ವಿಚಾರಗಳು ಅವರ ಸ್ನೇಹಕ್ಕೆ ಅಡ್ಡಿಯಾಗಿರುವುದಿಲ್ಲ.
ಕಾಮನ್ ಫ್ಯಾಕ್ಟರ್ ಬಿಟ್ಟು ಇತರ ಅಂಶಗಳಲ್ಲೂ ಅವರ ಚಿಂತನೆ ನಮ್ಮ ಚಿಂತನೆಗೆ ಹೊಂದಿಕೆಯಾಗಬೇಕು, ನನ್ನ ಯೋಚನೆಗೆ ಅನುಗುಣವಾಗಿ ಸ್ನೇಹಿತನೂ ಯೋಚಿಸಬೇಕು, ನಡೆದುಕೊಳ್ಳಬೇಕು ಎಂದುಕೊಳ್ಳುವುದು ಶುದ್ಧ ಸ್ವಾರ್ಥವೇ ಹೊರತು ವೈಚಾರಿಕ ಪ್ರಜ್ಞೆಯಂತೂ ಆಗಲು ಸಾಧ್ಯವಿಲ್ಲ. ಹೊಂದಿಕೆಯಾಗದಿದ್ದರೆ ಮೌನವಾಗಿರಬೇಕೆ ಹೊರತು ಇನ್ನೇನೋ ಮಾಡದಿರುವುದು ಕ್ಷೇಮ.

............


ಒಂದು ದಿನ ಆಫ್ ಲೈನ್ ಇದ್ದು ನೋಡಿ
ಭೂಮಿಯೇನೂ ಅಡಿಮೇಲಾಗುವುದಿಲ್ಲ.

ಕ್ಷಣ ಕ್ಷಣಕ್ಕೂ ಮೆಸೇಜುಗಳನ್ನು ನೋಡುತ್ತಲೇ ಇಲ್ಲದಿದ್ದರೆ ಕಳೆದುಕೊಳ್ಳುವುದೇನೂ ಇಲ್ಲ.
ಕೊನೆ ಪಕ್ಷ ರಜೆಯ ದಿನವಾದರೂ ಆಫ್ ಲೈನ್ ಹೋಗಿ ನೋಡಿ. ವಾಟ್ಸಪ್ಪೋ, ಫೇಸುಬುಕ್ಕೋ ಇವಕೆಲ್ಲಾ ಏಕಾಏಕಿ ಬಂದು ರಾಶಿ ಬೀಳುವ ಮೆಸೇಜುಗಳನ್ನು ಒಂದೇ ಬಾರಿಿ ನೋಡಿ ಉತ್ತರಿಸಲೂ ಸಾಧ್ಯವಾಗುತ್ತದೆ. ಈ ಮೂಲಕ ಇಡೀ ದಿನ ಕೈಯ್ಯಲ್ಲೇ ಮೊಬೈಲು ಹಿಡಿದು ಕೂರುವುದು ತಪ್ಪುತ್ತದೆ. ಆ ಸಮಯವನ್ನು ಬೇರೆ ಉಪಯುಕ್ತ ಕಾರ್ಯಕ್ಕೆ ಬಳಸಬಹುದು.
ಜೊತೆಗೆ ಎಲ್ಲೋ ಜನಜಂಗುಳಿಯಲ್ಲಿದ್ದೇನೆಂಬ ಮುಜುಗರ ಬಿಟ್ಟು ತುಸು ಏಕಾಂತದ ಖುಷಿ ಅನುಭವಿಸಬಹುದು. ಕೆಲಸಕ್ಕೆ ಬಾರದ ಫಾರ್ವರ್ಡ್ ಸಂದೇಶಗಳನ್ನು ಡಿಲೀಟ್ ಮಾಡುತ್ತಾ ಕೂರುವ ಬದಲು ಆಸಕ್ತಿಯಿರುವ ಇನ್ನಾನಾದರೂ ಕೆಲಸ ಮಾಡಬಹುದು.
ಆನ್ ಲೈನ್ ಇಲ್ಲದ ತಕ್ಷಣ ದೊಡ್ಡದೇನೋ ಸಂಭವಿಸುವತ್ತದೆ ಎಂಬಂಥ ಅವ್ಯಕ್ತ ಆತಂಕ ಹಾಸ್ಯಾಸ್ಪದ.

..............

ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಂದಾಗ ಏನು ಮಾಡಬೇಕು
ಅವರವರಿಗೆ ಅವರವ ಅನಿಸಿಕೆ ಹೇಳುವ ಹಕ್ಕಿದೆ.
ಆದರೆ ಇನ್ನೊಬ್ಬರ ಭಾವನೆಗಳನ್ನು ಕೆಣಕುವ ಅಥವಾ ಪ್ರಶ್ನಿಸುವ (ಸಮಾಜಘಾತುಕವಲ್ಲದ ನಂಬಿಕೆಗಳ ಬಗ್ಗೆ) ಹಕ್ಕಿಲ್ಲ. ಸಮಸ್ಯೆ ಶುರುವಾಗುವುದೇ ಇಲ್ಲಿ.
ನಾನು ನಂಬುವ ವಿಚಾರ ಸತ್ಯ, ಪಕ್ಕದವನ ನಂಬಿಕೆ ಸುಳ್ಳು ಎಂಬ ಖಚಿತ ಅನಿಸಿಕೆಯನ್ನು ಸಾದ್ಯಂತ ಹೇರಲು ಹೊರಟಾಗ ಆಗುವ ಎಡವಟ್ಟು. ಅದೇ ರೀತಿ ಪಕ್ಕದವನ ಅನಿಸಿಕೆ ಅವನ ನಂಬಿಕೆ. ಅದನ್ನು ಆತ ನಂಬಿದ್ದರೆ ನಿಮಗೇನು ಕಷ್ಟ. ಸುಮ್ಮನಿದ್ದು ಬಿಡಿ. ಅದರಿಂದ ನಿಮಗೇನೂ ನಷ್ಟವಿಲ್ಲ, ಕಷ್ಟವೂ ಇಲ್ಲ. ಆತನ ನಂಬಿಕೆ ಸುಳ್ಳಾದರೆ ಅದರಿಂದ ಕಷ್ಟವಾಗುವುದು ಅವನಿಗೇ ತಾನೆ. ನೀವ್ಯಾಕೆ ಉರಿದು ಬೀಳುತ್ತೀರಿ.
ಇದನ್ನು ಹೊರತುಪಡಿಸಿ ನಮಗೇ ಏಟು ಬಿತ್ತು ಎನ್ನುವ ಹಾಗೆ ಸಾಮಾಜಿಕ ಜಾಲ ತಾಣಗಳಲ್ಲಿ ಎಗರಿ ಬೀಳುವುದು, ಹಾರಾಡುವುದರಿಂದಲೇ ಸಂಘರ್ಷಗಳು ಶುರುವಾಗುವುದು.
ಅಂದ ಹಾಗೆ ಇಂತಹ ಸಂಘರ್ಷಗಳು ಅವಾಚ್ಯ ಪದ ಬಳಕೆಗೆ ಸೀಮಿತವಾಗಿರುತ್ತವೆಯೇಹೊರತು ತಾರ್ಕಿಕ ಅಂತ್ಯ ಕಾಣುವುದೇ ಇಲ್ಲ...


No comments: