ಬಲ್ಲಿರೇನಯ್ಯ...? ಮೂರು ವರ್ಷ ಭರ್ತಿಯಾಯಿತು!

ನಮಸ್ತೆ....

ಹೀಗೊಂದು ಸ್ವಗತ...

ಹೌದು... ಬಲ್ಲಿರೇನಯ್ಯ ಯಕ್ಷಕೂಟ ಹೆಸರಿನ ಈ ವಾಟ್ಸಪ್ ಗ್ರೂಪು ಶುರುವಾಗಿ ಈ ನವೆಂಬರ್ 7ನೇ ತಾರೀಕಿಗೆ ಮೂರು ವರ್ಷಗಳು ಭರ್ತಿಯಾದವು. 2014ರಲ್ಲಿ ಆಟಕ್ಕೆ ಹೋಗುವ ಸಮಾನಾಸಕ್ತ ಗೆಳೆಯರನ್ನು ಒಂದೇ ಕ್ಲಿಕ್ಕಿನಲ್ಲಿ ಸಂಪರ್ಕಿಸುವ ಉದ್ದೇಶದಿಂದ ಶುರು ಮಾಡಿದ್ದು. ಇಂದು ಬಹುತೇಕ ದಿನಗಳಲ್ಲಿ 256ಕ್ಕೆ 256 ಸದಸ್ಯರ ಭರ್ತಿ ಕೋರಂ ಮೂಲಕ ಯಕ್ಷಗಾನದ ವಿಚಾರಕ್ಕೆ ಮಾತ್ರ ಸೀಮಿತವಾಗಿರುವ ಮೂಲಕ ಜವಾಬ್ದಾರಿಯುತವಾಗಿರುವ ಯಕ್ಷಪ್ರೇಮಿಗಳ ಬಳಗವೆಂಬ ಸಾರ್ಥಕತೆ ಹೊಂದಿದೆ. ಯಕ್ಷಗಾನದ ಮಾಹಿತಿ ಪ್ರಸಾರ, ಹಂಚಿಕೊಳ್ಳುವಿಕೆ ಎಂಬುದು ನಮ್ಮ ಈ ಗ್ರೂಪಿನ ಏಕೈಕ ಅಜೆಂಡಾ. ಅದಕ್ಕೆ ಪೂರಕವಾಗಿದೆ ಗ್ರೂಪು ಎಂಬುದು ನನ್ನ ಅನಿಸಿಕೆ.

ಯಕ್ಷಗಾನಕ್ಕೊಂದು ಗ್ರೂಪು ಮಾಡುವುದು, ಅದಕ್ಕೆ ಒಂದಷ್ಟು ಸದಸ್ಯರನ್ನು ಸೇರಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸಾಧನೆಯೋ, ಅಪರೂಪದ ವಿಚಾರವೋ, ಗ್ರೂಪಿಗೆ ಮೂರು ವರ್ಷ ತುಂಬುವುದು ಇವೆಲ್ಲ ಐತಿಹಾಸಿಕ ಸಾಧನೆಯೋ ಅಲ್ಲವೇ ಅಲ್ಲ. ಆದರೆ,
ಮೂರು ವರ್ಷಗಳ ಹಿಂದೆ ವಿನಾ ಕಾರಣ ಹೀಗೊಂದು ಗ್ರೂಪನ್ನು ಯಾವುದೇ ಜವಾಬ್ದಾರಿಗಳಿಲ್ಲದೆ ಶುರು ಮಾಡುವಾಗ ವಾಟ್ಸಪ್ಪು ಎಂಬ ಈ ಮಾಧ್ಯಮ ಈಗಿನ ಮಟ್ಟಕ್ಕೆ ಬೆಳೆದಿರಲಿಲ್ಲ. ಬಹುಶಹ 4ಜಿ ಯುಗ ಆಗ ಆರಂಭವಾಗಿರಲಿಲ್ಲ. ಬಹುತೇಕರ ಕೈಲಿ ವಾಟ್ಸಪ್ಪು ಇರಲೂ ಇಲ್ಲ. ಯಕ್ಷಗಾನಕ್ಕೆಂದು ಆಗ ಮೀಸಲಾಗಿದ್ದ ಗ್ರೂಪುಗಳು ಬಹುಷ ಎರಡೋ ಮೂರೋ ಅಂತ ನನ್ನ ನೆನಪು.
ಹಾಗಾಗಿ ನಮ್ಮ ಈ ಗ್ರೂಪು ಶುರುವಾದಾಗ ಅದಕ್ಕೆ ತುಂಬ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಇಷ್ಟು ಮಂದಿಯನ್ನು ಸೇರಿಸಬೇಕೆಂಬ ಉದ್ದೇಶವೇ ಇಲ್ಲದಿದ್ದರೂ ಸ್ನೇಹಿತರು, ಸಮಾನನಮಸ್ಕರ ಶಿಫಾರಸ್ಸಿನಿಂದಲೇ ನೋಡ ನೋಡುತ್ತಿದ್ದಂತೆ ಗ್ರೂಪು ತುಂಬಿ ಹೋಯಿತು. ವಾಟ್ಸಪ್ ಬಳಗದ ಗರಿಷ್ಠ ಸದಸ್ಯರ ಸಂಖ್ಯೆ 100ಕ್ಕೆ ಸೀಮಿತವಾಗಿದ್ದಾಗ ಅನಿವಾರ್ಯವಾಗಿ ಇನ್ನೊಂದು ಗುಂಪು ಮಾಡಬೇಕಾಗಿ ಬಂತು. ನಡುವೆಯೊಮ್ಮೆ ಹೈಕ್ ಮೆಸೆಂಜರ್ ಪ್ರಯೋಗ ನಡೆಸಿದರೂ ಅದು ಯಶಸ್ವಿಯಾಗಲಿಲ್ಲ. ವಾಟ್ಸಪ್ ಸದಸ್ಯರ ಸಂಖ್ಯೆಯನ್ನು 256ಕ್ಕೆ ಏರಿಸಿದಾಗ ನಮ್ಮ ಗುಂಪಿಗೂ ಹೆಚ್ಚು ಬಲ ಬಂತು.

ತುಂಬ ಖುಷಿಯ ಸಂಗತಿ ಎಂದರೆ ಗುಂಪಿನ ಆರಂಭದ ದಿನಗಳಲ್ಲಿ ಜೊತೆಗಿರುವ ತುಂಬಾ ಸ್ನೇಹಿತರೂ ಈಗಲೂ ಜೊತೆಗಿದ್ದಾರೆ. ಎಷ್ಟೋ ಮಂದಿಯ ಮುಖ ಪರಿಚಯ, ಮಾತನಾಡಿ ಗುರ್ತವೂ ಇಲ್ಲ. ಆದರೂ ಯಕ್ಷಗಾನದ ಕಾರಣಕ್ಕೆ ಅವರಿಲ್ಲಿ ಆಪ್ತರಾಗಿದ್ದಾರೆ. ಯಾವ ರೀತಿ ತಾಂಬೂಲ ಮೆಲ್ಲುವವರು ವಿನಾ ಕಾರಣ ಆಪ್ತರಾಗುತ್ತಾರೋ ಹಾಗೆಯೇ ಯಕ್ಷಗಾನದ ಹುಚ್ಚು ನಮ್ಮನ್ನಿಲ್ಲಿ ಬಂಧಿಸಿದೆ.
ನನಗಿನ್ನೂ ನೆನಪಿದೆ. ಒಮ್ಮೆ ಕದ್ರಿಯಲ್ಲಿ ಆಟವೊಂದರಲ್ಲಿ ಸಿಕ್ಕಿದ ಕರ್ಣಾಟಕ ಬ್ಯಾಂಕಿನ ಉದ್ಯೋಗಿ ಶ್ರೀ ಶ್ರೀಕಾಂತ ರಾವ್ ಆಟದ ಬಗ್ಗೆ ನನ್ನಲ್ಲಿ ಮಾಹಿತಿ ಕೇಳಿದರು. ನಮ್ಮ ಗ್ರೂಪಿನ ಬಗ್ಗೆ ತಿಳಿಸಿದೆ, ಆಸಕ್ತಿ ತೋರಿದರು. ಸೇರಿಸಿದೆ, ನನಗವರ ಪರಿಚಯವೇ ಇಲ್ಲ. ಅವರು ಇಂದಿಗೂ ಬಳಗದಲ್ಲಿದ್ದಾರೆ. ಇಂತಹ ನೂರಾರು ಮಂದಿ ಇದ್ದಾರೆ ಇಂದು ನಮ್ಮ ಜೊತೆ. ಕೆಲವರು ನಿಶ್ಯಬ್ದರಾಗಿ, ಹಲವರು ಸಕ್ರಿಯರಾಗಿ. ಸಹಜವಾಗಿ ಮಂಗಳೂರಿಗರೇ ಇಲ್ಲಿ ಜಾಸ್ತಿ. ಹಾಗಂತ ಕುಂದಾಪುರ, ಉಡುಪಿ, ಕಾಸರಗೋಡು, ಅಮೆರಿಕಾ, ಅಬುದಾಭಿ, ಕೊಡಗು, ಮುಂಬೈ, ಚೆನ್ನೈ, ತುಮಕೂರು, ಬೆಂಗಳೂರು... ಹೀಗೆ ಪರವೂರಲ್ಲಿ ನೆಲೆಸಿರುವ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರವರ ಮನೆಯಲ್ಲೇ ಕುಳಿತು ಇಲ್ಲಿನ ಆಟಗಳ ತುಣುಕುಗಳನ್ನು ಕಂಡು ಪ್ರೋತ್ಸಾಹಿಸುತ್ತಾರೆ. ತೆಂಕು, ಬಡಗು ಎರಡೂ ತಿಟ್ಟುಗಳ ಆಸಕ್ತರಿದ್ದಾರೆ. ಮಹಿಳೆಯರೂ ಇದ್ದಾರೆ. ನನ್ನ ಹೆಚ್ಚಿನ ಸಂಪರ್ಕದ ಮಾಧ್ಯಮ ಮಿತ್ರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವೃತ್ತಿಪರ ಹಾಗೂ ಹಿರಿಯ ಕಲಾವಿದರಾದ ಸತ್ಯನಾರಾಯಣ ಪುಣ್ಚಿತ್ತಾಯರು, ವಾದಿರಾಜ ಕಲ್ಲೂರಾಯರು, ನಾ.ಕಾರಂತ ಪೆರಾಜೆ ಅವರು, ದುರ್ಗಾಪರಮೇಶ್ವರಿ ಕುಕ್ಕಿಲ ಅವರು, ಮುರಳಿಕೃಷ್ಣ ತೆಂಕಬೈಲು ಅವರು, ಭವ್ಯಶ್ರೀ ಕುಲ್ಕುಂದ ಮತ್ತಿತರರು ನಮ್ಮ ನಡುವೆ ಇದ್ದಾರೆ. ಹಿರಿಯ ಸಾಹಿತಿ
ಮಾತ್ರವಲ್ಲ ಸದಸ್ಯರ ಪೈಕಿ ಹವ್ಯಾಸಿಗಳು ತುಂಬಾ ಮಂದಿ ಇದ್ದಾರೆ. ಆಗೊಮ್ಮೆ ಈಗೊಮ್ಮೆ ಅವರ ಪ್ರತಿಭೆ ಬೆಳಕಿಗೆ ಬರುತ್ತದೆ.

ಅಡ್ಮಿನ್ ಗ್ರೂಪಿಗೆ ಸದಸ್ಯರನ್ನು ಸೇರಿಸುತ್ತಾನೆ ಅಷ್ಟೆ. ಅದನ್ನು ಚೆಂದದಿಂದ, ಒಪ್ಪ ಓರಣದಿಂದ ಕರೆದೊಯ್ಯುವುದು ಸದಸ್ಯರು. ಬೆಳಗ್ಗೆದ್ದ ತಕ್ಷಣ ಮಾಧ್ಯಮ ವರದಿಗಳನ್ನು ಅಚ್ಚುಕಟ್ಟಾಗಿ ಹಂಚಿಕೊಳ್ಳುವ ಬೆಂಗಳೂರಿ ಜಯ ರೈ ಅವರು, ಎಲ್ಲಿಯೇ ಆಟಕ್ಕೆ ಹೋದರೂ ಚೆನ್ನಾಗಿ ವಿವರ ಸಹಿತ ಆಡಿಯೋ ಹಂಚಿಕೊಳ್ಳುವ ಹಿರಿಯರಾದ ಸತೀಶ್ ಮಂಜೇಶ್ವರರು, ಅಕ್ಷಯಕೃಷ್ಣ, ಆನೆಕಲ್ಲು ಗಣೇಶ ಪ್ರಸಾದ್, ಇತರ ಮಾಹಿತಿ ಹಂಚಿಕೊಳ್ಳುವ ಮಿಥುನ್ ಉಡುಪರು, ಮಚ್ಚಿನ, ಕೃಷ್ಣ ಶರ್ಮ, ರವಿ ಮಾಸ್ಟರ್ ಕೊಡಗು, ಕರುಣಾಕರ ಬಳ್ಕೂರು, ಸಂದೇಶ್, ನೆಕ್ಕರಮೂಲೆ, ರಘು ಮುಳಿಯ, ಶಶಿಧರ, ರವೀಶ್, ಶಂಕರ್, ಕೃಷ್ಣಪ್ರಮೋದ, ಪ್ರಕಾಶ್, ಈಶ್ವರಚಂದ್ರ, ಬೆಂಗಳೂರಿನಲ್ಲಿರುವ ಹಲವು ಗೆಳೆಯರ ಸಹಿತ ಹಲವು ಮಂದಿ ಗ್ರೂಪನ್ನು ಬೆಳೆಸಿದ್ದಾರೆ (ಕೆಲವರ ಹೆಸರು ಬಿಟ್ಟು ಹೋಗಿರಬಹುದು... ಕ್ಷಮಿಸಿ, ನೆನಪಿಗೆ ಬಂದ ಹೆಸರುಗಳನ್ನಷ್ಟೇ ಉಲ್ಲೇಖಿಸಿದ್ದೇನೆ).

ಬೇರೆ ಯಕ್ಷಗಾನ ಗ್ರೂಪುಗಳ ಅಡ್ಮಿನ್ ಗಳಾಗಿರುವ ಸತೀಶ್ ಮಂಜೇಶ್ವರ, ಲಕ್ಷ್ಮಿ ಮಚ್ಚಿನ, ರವೀಶ್ ಉಪ್ಪಿನಂಗಡಿ, ಕಲಾಪೋಷಕರಾದ ಡಾ.ಪದ್ಮನಾಭ ಕಾಮತ್ ಸರ್...ಸೇರಿದಂತೆ ಹೀಗೆ ಸೂಕ್ಷ್ಮವಾಗಿ ಗ್ರೂಪನ್ನು ಗಮನಿಸಿ, ಪ್ರೋತ್ಸಾಹಿಸುವ ಹಲವು ಮಂದಿ ಇಲ್ಲಿದ್ದಾರೆ.

ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಹಂಚಿಕೊಳ್ಳುವ ಹರೀಶ ಮಾಂಬಾಡಿ, ಹರೀಶ್ ಕುಲ್ಕುಂದ, ಜಿತೇಂದ್ರ ಕುಂದೇಶ್ವರ, ಸೌಮ್ಯಶ್ರೀ ಮಾರ್ನಾಡು, ಕೋಡಿಬೆಟ್ಟು ರಾಜಲಕ್ಷ್ಮೀ ಸೇರಿದಂತೆ ಹತ್ತಾರು ಮಂದಿ ಗ್ರೂಪಿಗೆ ಬೌದ್ಧಿಕ ಗಾಂಭೀರ್ಯತೆ ತಂದುಕೊಡುತ್ತಾರೆ.

ಇನ್ನು ರಾತ್ರಿಯ ಆಟವನ್ನು ಅಲ್ಲಿಂದಲೇ ಲೈವ್ ನೀಡುವುದರಲ್ಲಿ ನಮ್ಮ ಗ್ರೂಪು ಸದಾ ಮುಂದೆ ಇದೆ ಎಂಬುದು ಖುಷಿಯ ವಿಚಾರ. ಜೊತೆಗೆ ಗ್ರೂಪಿನ ನಿಯಮವನ್ನು ಎಲ್ಲರೂ ಗೌರವಿಸುತ್ತಾರೆ ಎಂಬುದು ಕೂಡಾ....ಯಕ್ಷಗಾನದ ಕುರಿತು ಯಾವುದೇ ಹೊಸ ಸುದ್ದಿ ಇದ್ದರೆ ತಕ್ಷಣ ನಾವದನ್ನು ಗುಂಪಿನಲ್ಲಿ ಹಾಕಲು ಪ್ರಯತ್ನಿಸುದ್ದೇವೆ. ಯಾವುದೇ ಸಂದರ್ಭ ವದಂತಿಗಳು ಅಥವಾ ಕಪೋಲಕಲ್ಪಿತ ಸುದ್ದಿಗಳಿಗೆ ಇಲ್ಲಿ ಅವಕಾಶವಿಲ್ಲ. ಯಾವುದೇ ಕಲಾವಿದರು, ಮೇಳಗಳು, ತಿಟ್ಟುಗಳು, ಕಲಾಪೋಷಕರ ವೈಯಕ್ತಿಕ ನಿಂದನೆಗಳಿಗೂ ಇಲ್ಲಿ ಅವಕಾಶವಿಲ್ಲ.

ಅವರವ ಕೆಲಸ, ಪರಿಸ್ಥಿತಿಗಳ ಕಾರಣದಿಂದ ನಾನೂ ಸೇರಿದಂತೆ ಈ ಗ್ರೂಪಿನಲ್ಲಿರುವ ಹಲವರಿಗೆ ಯಕ್ಷಗಾನ ಇಷ್ಟವಾದರೂ ಬಯಲಾಟಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭ ಆಟ ನಡೆಯುವ ಮಾಹಿತಿ, ನಡೆದ ಆಟಗಳ ಮಾಹಿತಿ ಹಾಗೂ ಆ ಕುರಿತ ಚರ್ಚೆಗಳು, ಹೊಸ ಬೆಳವಣಿಗೆಗಳು, ಕಲಾವಿದರ ಬದಲಾವಣೆ ಇತ್ಯಾದಿ ಮಾಹಿತಿಗಳ ವಿನಿಯಮ ಒಂದು ಹೋಮ್ಲಿ ಫೀಲ್ ಕೊಡುತ್ತದೆ ಎಂಬುದು ನನ್ನ ಅನಿಸಿದೆ.

ವೈಯಕ್ತಿಕವಾಗಿ ನನಗೆ ಈ ಗ್ರೂಪಿನಿಂದ ಎಷ್ಟೋ ಮಂದಿ ಪರಿಚಯವಾಗಿದ್ದಾರೆ. ಎಷ್ಟೋ ಮೇಳಗಳ ಕಲಾವಿದರ ಕುರಿತು ಮಾಹಿತಿ ಸಿಕ್ಕಿದೆ. ಹಾಗಾಗಿ ವ್ಯವಸ್ಥಿತವಾಗಿ ಯಕ್ಷಗಾನವನ್ನು ತಿಳಿದುಕೊಳ್ಳಲು ಸಹಾಯವಾಗಿದೆ... ನಿಮಗೂ ಪ್ರಯೋಜನವಾಗಿರಬಹುದು.


ಏನೇ ಇರಲಿ. ಬದಲಾದ ಕಾಲಘಟ್ಟ, ತಂತ್ರಜ್ಞಾನಕ್ಕೆ ಯಕ್ಷಗಾನವೂ ತೆರೆದುಕೊಂಡಿದೆ. ಜೊತೆಗೆ ವಾಟ್ಸಪ್ಪಿನಂತಹ ಗುಂಪು ಅದರ ಉಳಿವಿಗೆ ದೊಡ್ಡದೊಂದು ಕೊಡುಗೆ ತನ್ನದೇ ರೀತಿಯಲ್ಲಿ ಕೊಡುತ್ತಿರುವುದು ಸತ್ಯ. ವಾಟ್ಸಪ್ಪು ಗುಂಪುಗಳೆಂದರೆ ಅಲರ್ಜಿಯಾಗುವಷ್ಟು ಮಟ್ಟಿಗೆ ಇಂದು ವ್ಯಾಪಿಸಿದ್ದು ಸತ್ಯ. ಆದರೆ, ವಿಷಯನಿಷ್ಠವಾಗಿದ್ದರೆ ಅದು ಯಾರಿಗೂ ಹೊರೆ ಎನ್ನಿಸುವುದಿಲ್ಲ ಎಂಬುದನ್ನು ಮೂರು ವರ್ಷ ತುಂಬಿರುವ ನಮ್ಮ ಈ ಬಳಗ ಸಾಬೀತುಪಡಿಸಿದೆ ಎಂದು ನಾನು ವಿನಮ್ರತೆಯಿಂದ ಅಂದುಕೊಳ್ಳುತ್ತೇನೆ.


(ಲೇಖನದಲ್ಲಿ ಸಕ್ರಿಯ ಸದಸ್ಯರ ಹೆಸರುಗಳನ್ನು ಬಳಸುವಾಗ ಕಣ್ತಪ್ಪಿನಿಂದ ಹೆಸರುಗಳು ಬಿಟ್ಟು ಹೋಗಿರುವ ಸಾಧ್ಯತೆ ಇದೆ. ದಯವಿಟ್ಟು ಅನ್ಯಥಾ ಭಾವಿಸಬಾರದು. ಗುಂಪು ಬೆಳೆಯುವಲ್ಲಿ ಪ್ರತಿ ಸದಸ್ಯರ ಪಾತ್ರವೂ ಬಲುದೊಡ್ಡದು. ಅದಕ್ಕೆ ಕೃತಜ್ಞನಾಗಿದ್ದೇನೆ).


ಈ ಸುದೀರ್ಘ ಬರಹ ಓದಿದ ಗೌರವಾನ್ವಿತ ಸದಸ್ಯರು ದಯವಿಟ್ಟು ಗುಂಪಿನಲ್ಲಿ ನಿಮ್ಮ ಅನುಭವವನ್ನು ಹಂಚಿಕೊಳ್ಳಬೇಕೆಂದು ವಿನಂತಿಸುತ್ತೇನೆ. ದಯವಿಟ್ಟು ಗುಂಪಿನ ನಿಮಯಪಾಲನೆ ಹಾಗೂ ಕಲಾ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ನಿಮ್ಮ ಸಹಕಾರಿ ಇನ್ನೂ ಮುಂದೆಯೂ ಇರಲಿ.
ಯಕ್ಷಗಾನಂ ಗೆಲ್ಗೆ

-ಕೆಎಂ (ಅಡ್ಮಿನ್)

No comments: