ಅಂಬೋಲಿ ಎಂಬ ಇನ್ನೊಂದು ಚಾರ್ಮಾಡಿ...!

 ಗಾಢ ಮಳೆಗೆ ಕಣಿವೆ ರಸ್ತೆಯಲ್ಲಿ ಚೆಂದದ ಸಂಚಾರ





ನಿರಂತರ ಧಾರಾಕಾರ ಮಳೆ, ಮೈಮೇಲೊಂದು ಬೆಚ್ಚಗಿನ ರೈನ್ ಕೋಟು ಮತ್ತು ಮಳೆಯಲ್ಲಿ ನೆನೆಯುವ ಹುಮ್ಮಸ್ಸು, ಒಂದು ಕ್ಯಾಮೆರಾ ಇದ್ದರೆ ಸಾಕು. ಬೆಳಗಾವಿ ಸಮೀಪದ ಅಂಬೋಲಿ ಘಾಟ್ ರಸ್ತೆಯ ಜಲಧಾರೆಗಳಲ್ಲಿ ನೆನೆದು ಬರಲು. ಹಸಿರ ಬೆಟ್ಟವನ್ನು ಸೀಳಿದ ರಸ್ತೆ, ಮಳೆಯ ನಿನಾದ ಮತ್ತು ಆಗಾಗ ಕವಿದು ಹುಚ್ಚು ಹಿಡಿಸುವ ತುಂಟ ಮಂಜಿನ ಸವಿಯಲ್ಲಿ ಮರೆಯಾಗಲು ನೀವಷ್ಟು ದೂರ ಹೋಗಲೇಬೇಕು.


ದಕ್ಷಿಣ ಮಹಾರಾಷ್ಟ್ರದ ಪುಟ್ಟ ಗಿರಿಧಾಮ ಪ್ರದೇಶ ಅಂಬೋಲಿ. ಪಶ್ಚಿಮ ಘಟ್ಟಗಳ ಶ್ರೇಣಿಯ ಸಹ್ಯಾದ್ರಿ ಶ್ರೇಣಿಯ ಸೆರಗಿನಲ್ಲಿದೆ, ಜೀವ ವೈವಿಧ್ಯತಾ ಕ್ಷೇತ್ರವಿದು. ಮಹಾರಾಷ್ಟ್ರದ ವೆಂಗುರ್ಲ ಬಂದರಿನಿಂದ ಕರ್ನಾಟಕದ ಬೆಳಗಾವಿಗೆ ಬ್ರಿಟಿಷರ ಕಾಲದಲ್ಲಿ ಸರಕು ಸಾಗಣೆಗೆ ರಸ್ತೆ ಸಂಪರ್ಕ ನಿರ್ಮಾಣವಾದಾಗ ಅಂಬೋಲಿ ಗ್ರಾಮಕ್ಕೆ ಮಾನ್ಯತೆ ಸಿಕ್ಕಿತು. ಜನರ ಓಡಾಟ ಶುರುವಾಯಿತು. ನೀವು ಕರ್ನಾಟಕದ ಬೆಳಗಾವಿಯಿಂದ ಮಹಾರಾಷ್ಟ್ರದ ಸಾವಂತವಾಡಿ ಸಾಗುವ ಹೆದ್ದಾರಿಯಲ್ಲಿ ಸುಮಾರು 70 ಕಿ.ಮೀ. ಸಾಗಿದರೆ ಅಂಬೋಲಿಯನ್ನು ತಲುಪಬಹುದು. ಅಥವಾ ಗೋವಾ ರಾಜ್ಯದ ಪಣಜಿಗೆ ಹೋಗಿ ಅಲ್ಲಿಂದ ಸಾವಂತವಾಡಿಗೆ ಬಂದು ಅಲ್ಲಿಂದ ಘಾಟ್ ಏರಿ ಅಂಬೋಲಿ ತಲುಪಲೂ ಬಹುದು.


ನೋಡಲು ಇಲ್ಲಿ ಏನಿದೆ?: ನಮ್ಮ ಚಾರ್ಮಾಡಿ ಘಾಟಿ ಮಾದರಿಯಲ್ಲಿ ಇಲ್ಲಿನ ಪರ್ಪೋಲಿ ಘಾಟ್ ರಸ್ತೆಯ ತುಂಬ ಅಲ್ಲಲ್ಲಿ ಜಲಧಾರೆ, ಹಸಿರು ಕಾನನ ಮತ್ತು ದಟ್ಟ ಮಂಜು ಕಾಣಸಿಗುತ್ತದೆ. ಘಾಟ್ ಹೆದ್ದಾರಿಯಲ್ಲಿ ಕಾಣಸಿಗುವ ಜಲಪಾತಗಳ ಬುಡ ತನಕ ಬಸ್ ಸಹಿತ ಯಾವುದೇ ವಾಹನ ತೆರಳುತ್ತದೆಯಾದರೂ ನಡೆದುಕೊಂಡು ಹೋಗುವದರಲ್ಲಿ ಮಜಾ ಇದೆ. ಮಳೆಗಾಲವೇ ಪ್ರವಾಸಕ್ಕೆ ಹೇಳಿ ಮಾಡಿಸಿದ ಕಾಲ. ಮಳೆಗಾಲದಲ್ಲಿ ಮಾತ್ರ ಅಂಬೋಲಿ ಜಲಪಾತದಲ್ಲಿ ನೀರಿನ ಹರಿವು ಜೋರಾಗಿರುತ್ತದೆ ಎಂಬುದನ್ನು ನೆನಪಿಡಿ.

ಈ ಘಾಟ್ ನ ನಡುವೆ ಹಿರಣ್ಯಕೇಶಿ ನದಿ ಜನನ ಪಡೆಯುತ್ತದೆ ಹಾಗೂ ಅ ಅಲ್ಲಿನ ಹಿರಣ್ಯಕೇಶ್ವರ ದೇವಸ್ಥಾನದ ವೀಕ್ಷಣೆಗೆ ಅವಕಾಶ ಇದೆ. ಅಂಬೋಲಿ ಹಾಗೂ ಸುತ್ತಮುತ್ತ ಸುಮಾರು 108ಕ್ಕೂ ಹೆಚ್ಚಿನ ಶಿವ ದೇಗುಲಗಳಿವೆ ಎಂಬ ಪ್ರತೀತಿಯಿದೆ.
ಮಳೆಗಾಲದಲ್ಲಿ ಅತಿ ಹೆಚ್ಚು (ಸರಾಸರಿ ವರ್ಷಕ್ಕೆ ಏಳು ಮೀಟರ್) ಮಳೆಯಾಗುವ ತಾಣವಿದು. ಶಿರ್ಗಾಂವ್ಕರ್ ಪಾಯಿಂಟ್ ಮತ್ತು ಕವಲೇಶೇಡ್ ಪಾಯಿಂಟ್ ಅಂಬೋಲಿಯ ಪಕ್ಕದಲ್ಲಿರುವ ಇನ್ನೆರಡು ಪ್ರಕೃತಿ ಸಿರಿಯ ಜಾಗಗಳು.
ಅಂಬೋಲಿ ಪೇಟೆಗಿಂತ 11 ಕಿ.ಮೀ. ದೂರದಲ್ಲಿದೆ ಕವಲೇಶೇಡ್ ಪ್ರಕೃತಿ ವೀಕ್ಷಣಾ ತಾಣ. ಪುಟ್ಟ ಪುಟ್ಟ ಜಲಧಾರೆಗಳು, ದಟ್ಟ ಮಂಜು ಹಾಗೂ ಅಗಾಧವಾದ ಕಣಿವೆ, ಕಣ್ಣು ಹಾಯಿಸಿದಷ್ಟೂ ಹಸಿರ ಸಿರಿಗಳ ಸಮೃದ್ಧ ತಾಣ ಕವಲೇಶೇಡ್. ನೀವಲ್ಲಿ ದೊಡ್ಡ ಧ್ವನಿಯಲ್ಲಿ ಮಾತಾಡಿದರೆ ಪ್ರತಿಧ್ವನಿ ಕೇಳಿಸುವಷ್ಟು ವಿಶೇಷವಾಗಿದೆ ಪ್ರಾಕೃತಿಕ ರಚನೆ. ಅಷ್ಟೆತ್ತರದಿಂದ ಕೆಳಗೆ ಧುಮುಕುವ ನೀರು ಮತ್ತೆ ಮಂಜಿನ ರೂಪದಲ್ಲಿ ಮೇಲೆ ಪುಟಿಯುವ ಪ್ರಾಾಕೃತಿಕ ವಿಸ್ಮಯಕ್ಕೆ ಸಾಕ್ಷಿಗಳಾಗಬಹುದು. ಮೇಲಿನ ವಿಶಾಲ ಬಯಲಿನಲ್ಲಿ ಬೇಯಿಸಿದ ಜೋಳದ ಕೋಡು, ಬಿಸಿ ಬಿಸಿ ವಡಾ ಪಾವ್ ಚಹಾ, ಕಡಲೆ ಬೀಜಗಳನ್ನು ಸವಿಯಲು ಮರೆಯದಿರಿ.
ಒಂದೇ ದಿನದಲ್ಲಿ ಹೋಗಿ ಬರಬಹುದಾದ ಪುಟ್ಟ ಪಿಕ್ನಿಕ್ ತಾಣ. ಉತ್ತಮ ರಸ್ತೆ, ಸಾಕಷ್ಟು ಭದ್ರತಾ ವ್ಯವಸ್ಥೆ ಹಾಗೂ ಮಾರ್ಗದರ್ಶನ, ವಾಹನಗಳೂ ಸಿಗುತ್ತವೆ ಎನ್ನುವುದು ಪ್ಲಸ್ ಪಾಯಿಂಟ್. ವೀಕೆಂಡ್ ಪ್ರವಾಸಕ್ಕೆ (ಮಳೆಗಾಲ ಮಾತ್ರ ಸೂಕ್ತ) ಹೇಳಿ ಮಾಡಿಸಿದ ಜಾಗ. ಆದರೆ ವೀಕೆಂಡುಗಳಲ್ಲಿ ಸಾವಿರಗಟ್ಟಲೆ ಮಂದಿ ಇಲ್ಲಿಗೆ ಬಂದು ಟ್ರಾಫಿಕ್ ಜಾಮ್ ಆಗುತ್ತಿರುವುದರಿಂದ ವಾರದ ನಡುವಿನ ದಿನಗಳಲ್ಲಾದರೆ ಆರಾಮವಾಗಿ ಹೋಗಿಬರಬಹುದು.

ಈ ಅಂಬೋಲಿ ಘಾಟ್ ರಸ್ತೆಯಲ್ಲಿ ಸಾಗುತ್ತಿದ್ದರೆ ಸಾಕಷ್ಟು ಚಂದದ ಕಣಿವೆಗಳು, ಸಣ್ಣ ಪುಟ್ಟ ಝರಿಗಳು, ಹಸಿರು ಕಾಡು, ತೆಳುವಾಗಿ ಹರಡಿದ ಮಂಜು, ಜಲಪಾತದ ಎದುರಿಗೆ ಸಾಕಷ್ಟು ಬಿಸಿ ಬಿಸಿ ವಡಾ ಪಾವ್ ಅಂಗಡಿಗಳು ಕಾಣಸಿಗುತ್ತವೆ. ಈ ರಸ್ತೆಯಲ್ಲಿ ಬಸ್ಸಿನ ವ್ಯವಸ್ಥೆಯೂ ಇದ್ದು, ಜಲಪಾತದ ಬುಡದಲ್ಲೂ ಇಳಿದುಕೊಳ್ಳಬಹುದು. ಸ್ವಂತ ವಾಹನದಲ್ಲೂ ಹೋಗಬಹುದು. ರಸ್ತೆಗೆ ತಾಗಿಯೇ ಜಲಪಾತ ಇರುವ ಕಾರಣ ವಾರಾಂತ್ಯಗಳಲ್ಲಿ ಸಾವಿರಗಟ್ಟಲೆ ಜನ ಸೇರುತ್ತಾರೆ ಎಂಬುದು ನೆನಪಿಡಿ. ಮಳೆಗಾಲದ ಜೂನ್ ನಿಂದ ಸೆಪ್ಟೆಂಬರ್ ತನಕ ಇಲ್ಲಿಗೆ ಹೋದರೆ ಆ ಮಳೆ, ಮಂಜು, ಕುಳಿರ್ಗಾಳಿಯ ಖುಷಿಯ ಅನುಭೂತಿ ಪಡೆಯಬಹುದು. ಮಳೆ ಕಡಿಮೆಯಾದ ಬಳಿಕ ಹೋದರೆ ಜಲರಾಶಿಯ ಸೊಬಗು ಸವಿಯಲು ಸಾಧ್ಯವಿಲ್ಲ.
-------

ಹೋಗುವುದು ಹೇಗೆ?
ರಸ್ತೆ ಮಾರ್ಗದಲ್ಲಿ ಅಂಬೋಲಿಗೆ ಕೊಲ್ಹಾಪುರದಿಂದ 128 ಕಿ.ಮೀ., ಬೆಳಗಾವಿಯಿಂದ 70 ಕಿ.ಮೀ. ಹಾಗೂ ಪಂಜಿಮ್ ನಿಂದ 90 ಕಿ.ಮೀ. ದೂರವಿದೆ. ಮುಖ್ಯ ಜಲಪಾತದಿಂದ ಮೂರು ಕಿ.ಮೀ. ದೂರದಲ್ಲಿರುವ ಅಂಬೋಲಿ ಪುಟ್ಟ ಪಟ್ಟಣದಲ್ಲಿ ವಸತಿ ವ್ಯವಸ್ಥೆ, ಕ್ಯಾಬ್ ವ್ಯವಸ್ಥೆಗಳಿವೆ. ಸಾಕಷ್ಟು ಪುಟ್ಟ ಪುಟ್ಟ ಹೊಟೇಲುಗಳಿದ್ದು, ವಡಾ ಪಾವ್ ಇಲ್ಲಿನ ಅತಿ ದೊಡ್ಡ ಆಕರ್ಷಣೆಗಳಲ್ಲಿ ಒಂದು.

--------
ಮಹಾರಾಷ್ಟ್ರದಲ್ಲಿ ವಡಾ ಪಾವ್ ತುಂಬ ಜನಪ್ರಿಯ ತಿನಿಸು. ಅಂಬೋಲಿ ಪೇಟೆ ಹಾಗೂ ಅಂಬೋಲಿ ಜಲಪಾತದ ಪಕ್ಕದಲ್ಲೂ ವಡಾಪಾವ್, ಖಾರದ ಮೆಣಸು, ಬಿಸಿ ಬಿಸಿ ಚಹಾ ಮಾರುವ ಅಂಗಡಿಗಳು ಸಾಕಷ್ಟಿವೆ. ಇದನ್ನು ತಿನ್ನಲೆಂದೇ ಇಲ್ಲಿಗೆ ಬರುವವರೂ ಇದ್ದಾರೆ. ತಂಪು ತಂಪು ಮಳೆಗೆ ನಡುಗುತ್ತಾ ಬಿಸಿ ಬಿಸಿ ವಡಾಪಾವ್ ತಿನ್ನುವುದು, ಚಹಾ ಹೀರುವ ಗಮ್ಮತ್ತೇ ಬೇರೆ ಬಿಡಿ.

----
-ಕೃಷ್ಣಮೋಹನ ತಲೆಂಗಳ.

No comments: